ಬುಧವಾರ, ನವೆಂಬರ್ 17, 2010

ಚಾರ್ಲಿನ್ ಚಾಪ್ಲಿನ್ ಆಣಿಮುತ್ತು










* ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಮ್ಮಸಮಸ್ಯೆಗಳು ಕೂಡ.
* ನಾವು ನಗು ಕಾಣದ ದಿನವೇ ನಮ್ಮ ಜೀವನದ ಅತಿ ದುಃಖದ ದಿನ.
* ನಾನು ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ, ಏಕೆಂದರೆ ನನ್ನ ಕಣ್ಣಿರು ಯಾರಿಗೂ ಕಾಣುವುದಿಲ್ಲ.

ಮಂಗಳವಾರ, ನವೆಂಬರ್ 16, 2010

ಜೀವನದ ರಹಸ್ಯ !

ಜೀವನದ ಕೊನೆಯ ದಿನಗಳು ಅವು.
98 ವಯಸ್ಸಿನ ಅಜ್ಜಿ ಸಾವಿನ ಬಾಗಿಲು ತಟ್ಟುತ್ತಿದ್ದಳು. ಆಕೆಯ ಕೊನೆಯ ದಿನಗಳು ಸುಂದರವಾಗಿರಲಿ ಎಂಬುದೇ ಅವರ ಮನೆಯವರ ಆಶಯ. ಕುಟುಂಬ ಸದಸ್ಯರೆಲ್ಲ ಆಕೆಯ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಹಾಲು, ಹಣ್ಣು, ಸಿಹಿ ಪದಾರ್ಥ ಏನು ನೀಡಿದರೂ ಅಜ್ಜಿಗೆ ಇಷ್ಟವಿರಲಿಲ್ಲ.
ಅಜ್ಜಿಯ ಹವ್ಯಾಸ ಅರಿತಿದ್ದ ಯುವತಿಯೊಬ್ಬಳು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಬಿಸಿ ಹಾಲಿನೊಂದಿಗೆ ಸೇರಿಸಿ ಅಜ್ಜಿಗೆ ನೀಡಿದಳು. ಮೊದ ಮೊದಲು ಬೇಡ ಅಂದ ಅಜ್ಜಿ, ತುಸು ಕುಡಿದು ಕೊನೆಗೆ ಪೂರ್ತಿ ಸೇವಿಸಿದಳು.
ಜೀವನದ ಕೊನೆಯ ದಿನಗಳು ಸುಂದರವಾದವು ಎಂಬುದು ಅಜ್ಜಿಯ ಕಂಗಳಲ್ಲಿ ಸ್ಪಷ್ಟವಾಗಿತ್ತು. ಕೊನೆಗೆ "ಜೀವನದ ರಹಸ್ಯವೊಂದನ್ನು ನನಗೆ ಹೇಳು" ಎಂದು ಯುವತಿ ಕೋರಿದಾಗ ಅಜ್ಜಿ ಹೇಳಿದಳು.
"ನಾನು ಕುಡಿದ ಹಾಲನ್ನು ಕೊಟ್ಟ ಹಸುವನ್ನು ಯಾರಿಗೂ ಮಾರಬೇಡ !"

ಶನಿವಾರ, ಅಕ್ಟೋಬರ್ 23, 2010

ನನಸೇ ನೀ ಕನಸು ಏಕಾದೇ ?

ಲ್ಲಿ ಅವಳು ಮತ್ತು ನಾನು...
ದಿಢೀರ್ ಬಂದ ಜೋರು ಮಳೆ. ಮಳೆ ನೀರಿಗೆ ನೆನೆಯದಂತೆ ನಿಲ್ಲಲು ಯಾವುದೇ ನೆರಳು ಕೂಡ ಇಲ್ಲ. ಇದ್ದಿದ್ದು ಒಂದೇ ಒಂದು ಛತ್ರಿ. ಅದಕ್ಕೊಂದು ಸಣ್ಣ ರಂಧ್ರ. ನೆತ್ತಿಯ ಮೇಲೆ ತಟ ತಟ ಸೋರುತ್ತ ಬೀಳುವ ಮಳೆ ಹನಿ. ಆ ಛತ್ರಿಯ ಕೆಳಗೆ ನಾನು ಮತ್ತು ಅವಳು ಮಳೆ ನೀರಿಗೆ ಸಿಲುಕದಂತೆ ಮುದುಡಿ ನಿಲ್ಲಬೇಕು.
ಇದೇನು ಹಗಲು ಕನಸು ಕಾಣುತ್ತಿದ್ದಾನೆ ಅನ್ನುತ್ತಿದ್ದಿರಾ? ಹೌದು, ಈಗ ಇದು ಕನಸೇ. ಬಹುಷ ಈ ಕನಸು ನನಸಾಗಬಾರದೆ ಎಂದು ಕನಿಷ್ಠ ಸಾವಿರ ಬಾರಿ ಅಂದುಕೊಂಡಿದ್ದೇನೆ. ಆದರೂ ಒಂದು ಮಾತು ಹೇಳಾ. ಇದು ಬರೀ ಕನಸಲ್ಲ. ನನಸೇ ಇಲ್ಲಿ ನನ್ನ ಕನಸು.
********
ಎಲ್ಲರೂ ಕನಸು ಕಾಣುತ್ತಾರೆ. ಅದು ನನಸು ಆಗಲೆಂದು ಬಯಸುತ್ತಾರೆ, ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ, ಕೆಲವೊಮ್ಮೆ ನಿಜವಾಗಿ ನಡೆದ ಮಧುರ ಘಟನೆಯೊಂದು ಮತ್ತೊಮ್ಮೆ ನಡೆಯುವುದಿಲ್ಲ. ದಿನ ಕಳೆದಂತೆ ಅದು ನೆನಪು ಮಾತ್ರವಾಗಿ, ಕನಸಿನ ರೂಪ ಪಡೆಯುತ್ತದೆ. ಮತ್ತೆ ಮತ್ತೆ ಆ ಕನಸು ಬೀಳುತ್ತದೆ. ಓ ದೇವರೇ, ಮತ್ತೊಮ್ಮೆ ಆ ಕನಸು ನನಸಾಗಬಾರದೆ ಎಂದು ಮನಸು ಬಹಳ ತುಡಿಯುತ್ತೆ, ನಲಗುತ್ತೆ, ಕೊನೆಗೆ ಅಳುತ್ತೆ.
ಪದೇಪದೇ ಕನಸು ಕಂಡು ಕಂಗಾಲಾಗುವ ಬದಲು ದಿಕ್ಕೆಟ್ಟು ಓಡಿ ಹೋಗಬೇಕು... ಅಲ್ಲಿ ಆ ಮಳೆ ಹುಡುಗಿ ಹುಡುಕಿ, ರಂಧ್ರದ ಛತ್ರಿ ಹಿಡಿದು ಮಳೆಯಲ್ಲಿ ನೆನೆಯೋಣ ಅನಿಸುತ್ತೆ.
********
ಅದು ಮಳೆಗಾಲ. ಪ್ರಕೃತಿಯ ಸುಂದರ ತಾಣ, ಮಲೆನಾಡಿನ ವನಸಿರಿ ನೋಡುವ ಅಸೆ. ನನಗಿಷ್ಟವಾದ ಅವಳೊಂದಿಗೆ ಹೋಗುವಾಸೆ. ನಾನೆಂದರೆ ಅವಳಿಗೆ ಬೆಟ್ಟದಷ್ಟು ಇಷ್ಟ. ಸರಿ ಯಾವುದಾದರೂ ಬೆಟ್ಟಕ್ಕೆ ಹೋಗೋಣ ಬಾರೆ ಅಂದಾಗ ಹೂಂ ಎಂದು ಮುದ್ದು ನಗೆ ಬೀರಿದಳು.
ಹೀಗೆ ಶುರುವಾಯ್ತು ನಮ್ಮ ಪರ್ವತಾರೋಹಣ. ಇಬ್ಬರೂ ಬೆಟ್ಟ ಏರಿ, ಗುಡ್ಡ ಸುತ್ತಿ, ಹಾಡಿ ಕುಣಿದಾಡಿದರೂ ಸುಸ್ತು ಕಾಣಲಿಲ್ಲ. ಸ್ವಚ್ಛಂದ ಹಕ್ಕಿಗಳಾಗಿ ಹಾರುವ ನಮ್ಮನು ನೋಡಿ ಮುಗಿಲು, ಭೂಮಿ ಒಂದಾದವು ಎನ್ನುವಷ್ಟು ಆಹ್ಲಾದಕರ ಪರಿಸರ.
ಮೇಘ ಮೇಳೈಸಿ ಬಂದಾಗ ನಾವು ಬೆಟ್ಟದ ಮೇಲೆ ಬಂದಿದ್ದೆವು. ಬಿಸಿಲ ಜೊತೆ ಮೇಘಗಳು ಹನಿಯೊಡೆದಾಗ ಬಾನಗಲ ಕಾಮನಬಿಲ್ಲು ಮೂಡಿ ರಮ್ಯ ಚೈತ್ರ ಕಾಲ. ಇನ್ನೇನು ಮಳೆ ಹನಿ ಬಿರುಸಾದಾಗ ದಿಕ್ಕಾಪಾಲಾದ ನಾವು ಮರವೊಂದರ ಕೆಳಗೆ ನಿಲ್ಲುವದು ಅನಿವಾರ್ಯವಾಯಿತು. ಮಳೆಯಲ್ಲಿ ನೆನೆಯುವ ಹಾಗೆ ಮಾಡಿದೆ ಎಂದು ನನ್ನವಳು ಬೈಯುವಳೋ ಎಂದು ಅವಳ ಮುಖ ನೋಡಿದರೆ, ಪಾಪ ನನ್ನ ಹುಡುಗ ನೆನೆಯುತ್ತಿದ್ದಾನೆ ಎಂದು ಅವಳು ಮರಗುತ್ತಿದ್ದಳು. ಆ ಕಣ್ಣಲ್ಲಿ ನೋವಿತ್ತು, ಮುಖದಲ್ಲಿ ಮಮತೆ ಇತ್ತು.
ತನ್ನ ಪುಟಾಣಿ ಬ್ಯಾಗನಿಂದ ಪುಟ್ಟ ಛತ್ರಿ ತೆಗೆದು ಆಸರೆಯದಳು. ಕಣ್ಣಲ್ಲಿ ಥ್ಯಾಂಕ್ಸ್ ಹೇಳಿದೆ. ಬೆಳದಿಂಗಳು ಮಲ್ಲಿಗೆ ಚೆಲ್ಲುವಷ್ಟು ಮುದ್ದಾಗಿ ನಕ್ಕಳು. ಅವಳಿಗೆ ನಾನು ಆಸರೆಯಾಗಿ, ನನಗೆ ಅವಳು ಆಸರೆಯಾಗಿ ನಿಂತಿದ್ದೆ ಬಂತು. ಉಹುಂ ಮಳೆ ನಿಲ್ಲುವ ಕರುಣೆ ತೋರಲಿಲ್ಲ.
ಈ ನಡುವೆ, ನನ್ನವಳ ಛತ್ರಿಯ ಚಾವಣಿಯಲ್ಲಿ ರಂಧ್ರ ಬಿದ್ದಿದ್ದರಿಂದ ಅದು ಹನಿಯಾಗಿ ತಟ ತಟ ಬೀಳುತ್ತಿದ್ದಂತೆ 'ಇದೊಳ್ಳೆ ಸಮಸ್ಯೆ ಆಯ್ತಲ್ಲ' ಎಂದು ಪೇಚಾಡಬೇಕಾಯಿತು. ಅದು ಅಷ್ಟಕ್ಕೇ ಸುಮ್ಮನಾಗದೆ ನೀರು ಝರಿಯಂತೆ ಹರಿಯತೊಡಗಿದಾಗ ನಾವಿಬ್ಬರು ಕಂಗಾಲು. ಇನ್ನು ಲ್ಲೇ ನಿಂತರೆ ಬಲು ಕಷ್ಟ ಎಂದು ಹಾಗೆ ಜೊತೆಯಾಗಿ ಮುಂದೆ ಹೆಜ್ಜೆ ಹಾಕಬೇಕಾಯಿತು. ಬೆಟ್ಟ ದಾಟಿ ರಸ್ತೆ ತಲುಪಿದಾಗ ಬಹುತೇಕ ಮಜ್ಜನರಾಗಿದ್ದೆವು.
ಸಾಕಪ್ಪ ಸಾಕು, ಯಾವುದಾದರು ವಾಹನ ಸಿಕ್ಕರೆ ಊರು ತಲುಪಿದರೆ ಸಾಕೆಂಬ ಭಾವನೆ ಆಗಲೇ ಮೂಡಿತ್ತು. ಇಷ್ಟಾದರೂ ಮುಂಗಾರು ಮಳೆ ಹುಡುಗಿಯಂತೆ ನನ್ನವಳು ಹಕ್ಕಿಯಂತೆ ಹಾಡುತ್ತ, ರಸ್ತೆ ಮೇಲೆಯೇ ಹೆಜ್ಜೆ ಹಾಕುತ್ತಿದ್ದರೇ ನನಗೆ ಚಳಿ ಅಮರಿ ಮೈಯೆಲ್ಲಾ ನಡುಕ.
"ಸಾಕು ಬಾರೆ, ಮನೆಯಲ್ಲಿ ಅಮ್ಮ ಪೂಜೆ ಮಾಡ್ತಾಳೆ ನಡಿ" ಎಂದಾಗ, ಹಲ್ಲುಗಿಂಜಿದ ನನ್ನವಳ ಮುಖ ನೋಡಿ ಒಳಗೊಳಗೇ ನಕ್ಕಿದ್ದು ಉಂಟು. ಕೊಂಚ ಮುಂದೆ ಸಾಗಿದೊಡನೆ ಕಾಣಿಸಿದೆ ಆಟೋಗೆ ಕೈ ಅಡ್ಡ ಹಾಕಿ ಊರು ತಲುಪಿ ಮನಸು ನಿರಾಳವಾದಾಗ ಮಳೆಯೂ ಶಾಂತವಾಗಿತ್ತು. 3 ಕಾಸಿನ ಮಳೆ ಅಂತಾ ನಾನು ಬೈದರೆ, ನಮ್ಮ ಪಿಕ್ನಿಕ್ ಹಾಳಾಯಿತು ಎಂದು ನನ್ನವಳಿಗೆ ಬೇಸರ.
ಬೆಳಗ್ಗೆ ಸರ್...ಸರ್...ಸರ್... ಎಂಬ ಸದ್ದಿನೊಂದಿಗೆ ಮುಗಿನ ಗೊನ್ನೆ ಸುರಿಸುತ್ತ ಬಂದ ನನ್ನ ಮಳೆ ಹುಡುಗಿಯ ನೋಡಿದಾಗಲೇ ನನಗೆ ಅರಿವಾಗಿದ್ದು ಅವಳಿಗೆ ಶೀತವಾಗಿತ್ತು. ಮುಖ ಕೆಂಪಗಾಗಿಸಿ, "ಕೋತಿ, ನಿನ್ನೆ ಅಮ್ಮ ಎಷ್ಟು ಬೈದರು ಗೊತ್ತಾ. ಮನೆಯಲ್ಲಿ ಯಕ್ಷಗಾನ ನಡೆಯಿತು. ಜತೆಗೆ ಈ ಹಾಳಾದ್ದ ಶೀತ ಬೇರೆ" ಎಂದು ಮಸಾಲೆ ಹಾಕಿ ಕುಕ್ಕಿದ್ದಳು.
---------
ಇದಾದ ಮೇಲೆ ಎಷ್ಟೋ ಬಾರಿ ಮತ್ತೆ ಆ ಬೆಟ್ಟಕ್ಕೆ ಹೋಗಬೇಕು. ಅದೇ ಹಳೆ ತೂತು ಬಿದ್ದ ಛತ್ರಿಯಲ್ಲಿ ಮಳೆಯಲ್ಲಿ ನೆನೆಯಬೇಕು ಎಂದು ಯೋಚಿಸಿದರೂ ಅದು ಸಾಧ್ಯವಾಗಲಿಲ್ಲ. ಬಹುಶ ಅದು ನನ್ನ ಸುಂದರ ದಿನ. ಕಾಣದ ಕನಸು ಅಂದು ನನಸಾಗಿತ್ತು. ಮತ್ತೆ ಮತ್ತೆ ಆ ಕನಸನ್ನು ಇಂದಿಗೂ ಕಾಣುತ್ತೇನೆ. ಮುಂದೆಯೂ ಕಾಣುತ್ತೇನೆ.

ಶನಿವಾರ, ಸೆಪ್ಟೆಂಬರ್ 18, 2010

ಬೂದಿಯಾದ ನೆನಪು...

ವತ್ತು ಆಫೀಸ್ ಗೆ ರಜಾ.
ಸುಮ್ನೆ ಒಬ್ಬನೇ ಬೇಜಾರಾಗಿತ್ತು. ಒಂಟಿ (!) ಜೀವನ ಬಲು ಬೇಸರ. ಹೊರಗೆ ಮಳೆ, ಸುತ್ತೋಕೆ ಆಗದೆ, ಮನೆಯಲ್ಲೂ ಕುಡೋಕೆ ಆಗದೆ ಚಡಪಡಿಕೆ. ಬೆಳಗ್ಗೆ ಮಾಡಿದ್ದ ಟೀ ಮತ್ತೆ ಮತ್ತೆ ಬಿಸಿ ಮಾಡಿ ಹೊಟ್ಟೆಗೆ ಇಳಿಸುತ್ತಾ, ಬಿಸಿ ಹೊಗೆ ಉಗುಳುತ್ತಾ ಮನೆಯೆಲ್ಲ ಮಂಜು ದಟ್ಟಿಸಿತ್ತು. ಟಿವಿ ರಿಮೋಟ್ ಒತ್ತಿ ಒಂದರ ನಂತರ ಮತ್ತೊಂದು ಚಾನೆಲ್ ಬದಲಿಸಿದರೂ 'ಛೆ ಒಳ್ಳೆ ಪ್ರೋಗ್ರಾಮ್ ಇಲ್ವಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದೆ ಸಾಕಾಯ್ತು.

ಬೆಳಗ್ಗೆಯಿಂದ ತೆಪ್ಪಗೆ ಬಿದ್ದಿದ್ದ ಮೊಬೈಲ್ ಇದ್ದಕ್ಕಿದ್ದಂಗೆ ಕಿರುಚಿ ಕೊಂಡಾಗ ಎತ್ತಿ ಕಿವಿ ಕೊಟ್ಟೆ.
'ನೀನು ಬ್ಲಾಗ್ ನಲ್ಲಿ ಹಾಕಿದ ಲೆಟರ್ ಡಿಲೀಟ್ ಮಾಡು. ನಂಗೆ ಇಷ್ಟ ಆಗ್ಲಿಲ್ಲ. ಅಷ್ಟೇ...'
ಫೋನ್ ಮಾಡಿದಾಕೆ ತುಸು ಖಾರವಾಗಿ ಹೇಳಿದ್ದು. ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ಸರಿ ಆಯಿತು ಅಂದೆ. ಆ ಕಡೆ ಫೋನ್ ಕುಕ್ಕಿದ ಶಬ್ದ ಸ್ಪಷ್ಟವಾಗಿ ಕೇಳಿಸಿತು.
ಒಂದು ಪತ್ರ ಇಷ್ಟೊಂದು ಪ್ರಭಾವ ಬಿರಿತ್ತಾ. ಅಷ್ಟೊಂದು ಕಿರಿ ಕಿರಿ ನೀಡಿತ್ತೇನೋ.. ಹೋಗಲಿ ಬಿಡು ಡಿಲೀಟ್ ಮಾಡಿದರಾಯ್ತು ಎಂದು ಮತ್ತೆ ಹೊಗೆ ತುಂಬಿಸಲು ಅಣಿಯಾದೆ. ಎನೇನೋ ನೆನಪಾಯ್ತು.

'ಛೀ... ಇದೇನು ಕೆಟ್ಟ ಚಟ. ನಂಗೆ ಸ್ವಲ್ಪನೂ ಇಷ್ಟಾ ಆಗೋಲ್ಲ. ಬಿಟ್ಟು ಬಿಡು ಅಂತ ಎಷ್ಟು ಸಲ ಹೇಳೋದು. ನೀ ಹೀಗೆ ಮಾಡ್ತಿದ್ದಾರೆ ಮುಂದೆ ಸರಿ ಆಗೋಲ್ಲ. ತಿಳಿತಾ...'
ಹುಂ ಗುಟ್ಟಿದ್ದೆ.
ಹುಂ ಅಲ್ಲ ಆನೆ ಮಾಡು ಅಂದಾಗ, ಅದಕ್ಕೂ ಹುಂ ಅಂದೆ. ನಾನು ಸುಳ್ಳು ಹೇಳ್ತಿದ್ದೇನೆ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅಧಿಕಾರ ಚಲಾಯಿಸಿ ನನಗೆ ಒಳ್ಳೆಯ ಮಾತು ಹೇಳಿದ್ದಳು.

ಒಂದು ಸಾರಿ ಆಫೀಸ್ ಹತ್ತಿರದ ಹೋಟೆಲನಲ್ಲಿ ಹೊಗೆ ಬಿಡುತ್ತ ಕುಳಿತಿದ್ದನ್ನ ನೋಡಿ ಗಲ್ಲ ಉಬ್ಬಿಸಿದ್ದಳು. 2 ದಿನ ಮಾತು ಬಂದ್. ಸಾಮಾನ್ಯವಾಗಿ ಹುಸಿ ಕೋಪ ಮಾಡಿಕೊಳ್ಳುತ್ತಿದ್ದ ಅವಳು ಆಗ ಸ್ವಲ್ಪ ಸೀರಿಯಸ್ ಆಗಿದ್ದು ನಂಗೆ ಭಯ ಮೂಡಿಸಿತ್ತು. ಹೇಗೋ ದಮ್ಮಯ್ಯ ಅಂದು ಅವಳನ್ನು ಪುಸಲಾಯಿಸಿ, ಹೊರಗೆ ಬಂದು ಮತ್ತೆ ದಂ ಎಳೆದಿದ್ದೆ. ಪಾಪ ಅವಳಿಗೆ ಮೋಸ ಮಾಡಿದೆನೋ ಅಂತ ಅನಿಸಿದ್ದಿಲ್ಲ.

ಮತ್ತೆ ಅವಳ ಮುಂದೆ ಬಂದಾಗ ನನ್ನ ಸು'ವಾಸನೆ' ಬರಬಾರದೆಂದು ಸುವಾಸನೆಯ ಸೋಪು, ಘಮ್ಮೆನ್ನುವ ಸೆಂಟು ಹಾಕಿದ್ದು ಉಂಟು. ಹಾಗೆ ಸುವಾಸನೆ ಹಿರಿ ಹೂವಿನಂತೆ ಅರಳುತ್ತಿದ್ದ ಅವಳು, 'ಸೆಂಟು ಒಳ್ಳೇದಿದೆ ಕಣೋ' ಅಂತು ಕಣ್ಣು ಮಿಟಿಕಿಸುತ್ತಿದ್ದಳು.
ಹೋಗುವಾಗ ತಿರುಗಿ ನೋಡಿ 'ಕೋತಿ' ಅಂತ ಬೈಯೋದನ್ನು ಮಾತ್ರ ಮರೆಯುತ್ತಿರಲಿಲ್ಲ. ಮುಂಗುರುಳು ಸವರಿ ತಿರುಗಿ ತಿರುಗಿ ನೋಡಿ ಹೋಗುತ್ತಿದ್ದ ಅವಳ ಮುಖದ ಮುದ್ದು ನಗು ಕಣ್ಮುಂದೆ ಉಳಿಯುತ್ತಿತ್ತು.

ಕೈ ಬೆರಳು ಸುಟ್ಟ ಅನುಭವವಾಗಿ ಎಚ್ಚರಗೊಂಡೆ. ಅವಳ ನೆನಪಲ್ಲಿ ಬೂದಿಯಾಗಿದ್ದೆ. ಈಗಲೂ ಅವಳು ಜತೆ ಇದ್ದಿದ್ದರೆ ಈ ಚಟ ಬಿಡುತ್ತಿದ್ದೆನೇನೋ....

ಕೈಲ್ಲಿದ್ದನ್ನು ಬಿಸಾಕಿ ಮನೆ ಹೊರಗೆ ಮಳೆಗೆ ಮುಖ ಒಡ್ಡಿದಾಗ ಹನಿಯಾಗಿ ಎಲ್ಲ ಕರಗಿ ಹೋದಂತಾಯಿತು.

ಮಂಗಳವಾರ, ಮೇ 18, 2010

ಯಾರಿಗುಂಟು ಯಾರಿಗಿಲ್ಲ...

ಯಾರಿಗುಂಟು ಯಾರಿಗಿಲ್ಲ...

ಬುಧವಾರ, ಮೇ 27, 2009

ಕಾಟು-ಗೀಟು

ಅಂತರ್ಜಾಲದಲ್ಲಿ ತೇಲಿ ಬಂದ ಈ ವ್ಯಂಗ್ಯ ಚಿತ್ರ ರೇಖೆಯಲ್ಲಿಯೇ ಜೀವನದ ಜೋಕಾಲಿ ತೋರ್ಪಡಿಸಿದೆ. ಮಾರುದ್ದದ ಕಥೆ ಗೀಚುವ ಅಗತ್ಯವನ್ನೇ ಕಿತ್ತು ಹಾಕಿರುವ ಈ ಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರನ ಬಗ್ಗೆ ಮಾಹಿತಿ ಇಲ್ಲದಿದ್ದರೂ ಇಲ್ಲಿ ಪ್ರಸ್ತುತಪಡಿಸಿದ್ದೇನೆ.

ಶನಿವಾರ, ಅಕ್ಟೋಬರ್ 18, 2008

Common Man ಕ್ರಾಂತಿಯಾದೀತು ಎಚ್ಚರಿಕೆ

"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"...
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.

ಮೊನ್ನೆ 'A WEDNESDAY' ಹಿಂದಿ ಚಿತ್ರ ನೋಡಿದೆ. ನೋಡಲೇಬೇಕಾದ ಚಿತ್ರ. ಜನಸಾಮಾನ್ಯನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಚಿತ್ರ. ನಮಗೆ ಯಾವುದೇ ಶಕ್ತಿ, ಅಧಿಕಾರವಿಲ್ಲ ಎಂದು ಕೈಚೆಲ್ಲಿ ಕೂರುವ ಸಾಮಾನ್ಯನಿಗೆ ಆತನ ದಿವ್ಯ ಸಾಮರ್ಥ್ಯವನ್ನು ಸ್ಮರಿಸುತ್ತದೆ.

ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ರೈಲುಗಳಲ್ಲಿ ಬಾಂಬ್ ಇಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ದುಷ್ಟ ಶಕ್ತಿಯನ್ನು ಸರ್ವನಾಶ ಮಾಡುವ ಓರ್ವ ಸಾಮಾನ್ಯ ಮನುಷ್ಯನ ಏಕಾಂಗಿ ಹೋರಾಟವೇ 'A WEDNESDAY'. ನಮ್ಮ ಕುಟುಂಬ (ದೇಶ) ಗಲೀಜಾಗಿದೆ. ನಾವೇ, ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂಬುದೊಂದೇ ಸಾರ.

ಯಾವುದೇ ತಂತ್ರಜ್ಞ, ವಿದ್ವಾಂಸ, ಮುತ್ಸದ್ಧಿ ಕೂಡ ಸಾಮಾನ್ಯ ವ್ಯಕ್ತಿಯೇ. ಜನರಿಂದ ಗುರುತಿಸಲ್ಪಟ್ಟು ಗಣ್ಯರ ಸಾಲಿನಲ್ಲಿ ಕುಳಿತಿರುತ್ತಾನೆ. ಅದೇ ರೀತಿ, ಓರ್ವ ವಿದ್ವಾಂಸ ಇಂದು ಜನಸಾಮಾನ್ಯನಾಗಿರಬಹುದು. ಆತನಲ್ಲೂ ಬುದ್ಧಿ, ಶಕ್ತಿ ಎಲ್ಲವೂ ಇದೆ. ಗಣ್ಯರೆನಿಸಿಕೊಂಡವರಿಗಿಂತಲೂ ಹೆಚ್ಚಿಗಿದೆ. ಎಲ್ಲವೂ ಒಟ್ಟುಗೂಡಿದರೇ ಕ್ರಾಂತಿಗೆ ನಾಂದಿ.

ಈ ಚಿತ್ರದಲ್ಲಿ ಸಾಮಾನ್ಯನೋರ್ವ ತನ್ನ ಬುದ್ಧಿ ಚತುರತೆಯಿಂದ ನೂರಾರು ಜನರನ್ನು ಬಲಿತೆಗೆದುಕೊಂಡ ಉಗ್ರರನ್ನು ಯಮಪುರಿಗೆ ಅಟ್ಟುತ್ತಾನೆ. ಅಮಾಯಕನ ಸಾವಿನ ಆಕ್ರಂಧನ ನೋಡಿ ಕೇಕೆ ಹಾಕುವ ದುಷ್ಟರಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ. ಯಾವುದೇ ಹಾಡು, ಕುಣಿತ, ತಮಾಷೆಗಳಿಲ್ಲದ ಚಿತ್ರ ಕೇವಲ ಒಂದುವರೆ ಗಂಟೆಯಲ್ಲಿ ಸಮಾಜದ ಎಲ್ಲ ಮುಖಗಳನ್ನು ತೋರಿಸುತ್ತದೆ.

ನಾವು A Stupid Common Man ಆದ್ರೆ: ಕೆಲವೊಮ್ಮೆ ಆಗಲೇಬೇಕು ಅನಿಸುತ್ತೆ. ಇಂದಿನ ಭ್ರಷ್ಟ ರಾಜಕೀಯ, ದುಷ್ಟ ಆಡಳಿತ, ಲಂಚಗುಳಿತನ, ಮೋಸದ ರಂಗೋಲಿ ಕೆಳಗೇ ತೂರುವ ಖದೀಮರು, ಅನಿಷ್ಟ ಪದ್ಥತಿ. ಛೇ, ಇನ್ನೂ ಎಷ್ಟು ದಿನ ಸಹಿಸ್ಕೋಬೇಕು. ಅಡ್ಜಸ್ಟ್ ಮಾಡ್ಕೊಂಡು ಸಾಕಾಗಿದೆ.

ವ್ಯವಸ್ಥೆ ಹದಗೆಟ್ಟು ಗಬ್ಬುನಾರುತ್ತಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಚಿಲ್ಲರೆ ಹಣಕ್ಕಾಗಿ ವಂಚಿಸುವ ಕೆಲ ಬಸ್ ಕಂಡಕ್ಟರ್, ಪೊಲೀಸ್, ಸರಕಾರಿ ಕಚೇರಿಗಳಲ್ಲಿನ ಲಂಚುಗಳಿತನ, ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇನ್ನೂ ಕೋಟಿಗಟ್ಟಲೇ ನುಂಗುವ ತಿಮಿಂಗಲುಗಳ ಲೆಕ್ಕ ಹಾಕಲು ಸಾಧ್ಯವೆ.

ಆದರೆ ಸಾಮಾನ್ಯನ ಸಹನೆಗೂ ಮಿತಿಯಿದೆ. ಸಹನೆ ಮೀರಿದರೇ ಆತನನ್ನು ತಡೆಯುವವರಿಲ್ಲ. ಕ್ರಾಂತಿಯಾದೀತು ಎಚ್ಚರಿಕೆ. ಏಕೆಂದರೆ, ಮನೆಗೆ ಜಿರಳೆ ಬಂದರೆ ಸಾಯಿಸಬೇಕೇ ಹೊರತು ಸಾಕುವುದಿಲ್ಲ.