ಮಂಗಳವಾರ, ಜುಲೈ 22, 2008

ಯಾರಿವಳು ಸೌಗಂಧಿ...?

ನಿಮಗೂ ಈ ಪ್ರಶ್ನೆ ಕಾಡಿರಬಹುದಲ್ಲವೇ? ಬಹುಷಃ ಯಾವುದೋ ಹುಡುಗಿಯ ಹೆಸರೋ ಅಥವಾ ಆಕೆಯ ಹೆಸರು ಸೂಚಿಸುವ ಕಲ್ಪನೆಯ ಹೆಸರು ಇರಬಹುದು ಎಂದು ಅನಿಸುವುದು ಉಂಟು. ನಿಮ್ಮ ಕಲ್ಪನೆ ಸ್ವಲ್ಪ ನಿಜವೂ ಹೌದು. ಇವಳು ನನ್ನ ಸುಂದರಿಯೇ.


ಹೆಸರು ಸೌಗಂಧಿ. ಪೂರ್ಣ ಹೆಸರು ಸೌಗಂಧಿಪುರ. ನದಿಯಂಚಿನಲ್ಲಿ ಗುಡ್ಡಗಳ ಸಾಲುಗಳ ನಡುವೆ ನಿಂತಿರುವ ನಯನ ಮನೋಹರಿ... ಅರ್ಥವಾಯಿತೆಂದುಕೊಂಡಿದ್ದೇನೆ. ಇದು ನನ್ನ ಊರು. ರಾಜ ಮಹಾರಾಜರ ಕಾಲದಲ್ಲಿ ಸೌಗಂಧಿಪುರವೆಂದು ಖ್ಯಾತಿಯಾಗಿದ್ದ ಪರಿಮಳದ ನಾಡು.

ಬೆಳಗಾವಿ ಜಿಲ್ಲೆಯ ಈಗಿನ ಸವದತ್ತಿಯೇ ಆಗಿನ ಸೌಗಂಧಿಪುರವಾಗಿತ್ತು. ರಟ್ಟ ಮಹಾರಾಜರ ಕಾಲದಲ್ಲಿ ಸೇವಂತಿಗೆ, ಮಲ್ಲಿಗೆ ವಿವಿಧ ಹೂಗಳಿಂದ ತುಂಬಿದ್ದ ಈ ನಾಡು ಸೌಗಂಧಿಪುರವೆಂದೇ ಖ್ಯಾತಿಯಾಗಿತ್ತು. ಹೆಸರಿಗೆ ತಕ್ಕಹಾಗೇ ಹೂಗಳ ಪರಿಮಳ ಇಲ್ಲಿ ಆವರಿಸಿತ್ತು.


ಅದೇನಾಯಿತೋ ಗೋತ್ತಿಲ್ಲ... ಬ್ರಿಟಿಷರ ಆಂಗ್ಲ ಭಾಷೆ, ಆಧುನಿಕ ಜಗತ್ತಿನತ್ತ ಜನರ ಆಕರ್ಷಣೆ ನಮ್ಮೂರಿನ ಸುಂದರಿಯ ಹೆಸರನ್ನೇ ಬದಲಾಯಿಸುವಂತೆ ಮಾಡಿತು ಎಂದು ನಮ್ಮ ಹಿರಿಯರು ಈಗಲೂ ದೂರುತ್ತಾರೆ. ಸೌಗಂಧಿಪುರದಿಂದ ಸೌಂದತ್ತಿಯಾಗಿ ಈಗ ಸವದತ್ತಿಯಾಗಿದೆ. ಆದರೆ, ನನಗೆ 'ಸೌಗಂಧಿ'ಯೇ ಇಷ್ಟ.


ಬೆಳಗಾವಿಯಿಂದ 80 ಕಿ.ಮೀ. ಹಾಗೂ ಧಾರವಾಡದಿಂದ 40 ಕಿ.ಮೀ. ಅಂತರದಲ್ಲಿರುವ ನಾಡು ಈ ಸೌಗಂಧಿ. ಮಲಪ್ರಭೆಯ ತಟದಲ್ಲಿ, ಏಳು ಗುಡ್ಡಗಳ ಯಲ್ಲಮ್ಮನ ಆಶೀರ್ವಾದದಲ್ಲಿ ಬೆಳೆಯುತ್ತಿರುವ ಪುಟ್ಟ ಪಟ್ಟಣ. ತಾಲೂಕು ಪ್ರದೇಶವಾಗಿ ಸುತ್ತ ಹತ್ತಾರು ಹಳ್ಳಿಯ ಗೌಡ. ಮಲಪ್ರಭೆಯ ಕೃಪೆಯಿಂದ ತೋಟಗಳಿಂದ ಸಮೃದ್ಧ.


ಮಲಪ್ರಭೆ ಕೋಪವೇ ಸೌಗಂಧಿಗೆ ವರ: ಒಮ್ಮೆ ಮಲಪ್ರಭೆ ತನ್ನ ಪಾಡಿಗೆ ಹರಿದು ಹೋಗುತ್ತಿದ್ದಳು. ಬಯಲು ದಾಟಿ ಸಾಲು ಗುಡ್ಡಗಳ ಸಂದಿಯಲ್ಲಿ ಧಾರೆಯಾಗಿ ಸಾಗುತ್ತಿದ್ದಳು. ಪಕ್ಕದಲ್ಲೇ ಇದ್ದ ಗುಡ್ಡವೊಂದರ ಮೇಲೆ ಕುಳಿತ ನವಿಲೊಂದು, "ಮಲಪ್ರಭೆ ನನ್ನನ್ನು ನೋಡಿ ಹೆದರಿ ಹೋಗುತ್ತಿದ್ದಾಳೆಂದು" ಕೇಕೆ ಹಾಕಿದೆ. ಇದರಿಂದ ಕೋಪಗೊಂಡ ಮಲಪ್ರಭೆ ಹಿಂದೆ ಬಂದು ನವಿಲು ಕುಳಿತ ಗುಡ್ಡವನ್ನೇ ಛಿದ್ರ ಮಾಡಿ ಮುಂದೆ ಸಾಗಿದಳಂತೆ. ಈಗ ಆ ಪ್ರದೇಶವೇ 'ನವಿಲುತೀರ್ಥ' ಎಂಬ ತಾಣವಾಗಿ ಪ್ರಸಿದ್ಧಿಯಾಗಿದೆ.


ನಮ್ಮ ತಾತ-ಮುತ್ತಾತರಿಂದ ಬಂದ ಈ ಕಥೆ ಇಂದಿಗೂ ಇಲ್ಲಿ ಪ್ರಸ್ತುತ. ಪ್ರತಿ ಬಾರಿಯೂ ನವಿಲುತೀರ್ಥಕ್ಕೆ ಹೋದಾಗ ಈ ಕಥೆ ನಿಜವಿರಬಹುದೇನೋ ಅನಿಸುತ್ತದೆ. ವಿಶೇಷವೆಂದರೆ ಈ ತಾಣದ ಸುತ್ತಮುತ್ತ ಸಾಕಷ್ಟು ನವಿಲುಗಳಿಗೆ. ಸ್ವಚ್ಛಂದವಾಗಿ ತಿರುಗುವ ಅವುಗಳನ್ನು ನೋಡಿದರೇ ಈ ತಾಣಕ್ಕೆ ನವಿಲುತೀರ್ಥ ಎಂಬ ಹೆಸರಿಟ್ಟಿರುವುದು ಸೂಕ್ತ. ಅನಂತರ ರಾಜ್ಯ ಸರ್ಕಾರ ಇಲ್ಲಿ ಒಂದು ಅಣೆಕಟ್ಟು ನಿರ್ಮಿಸಿ ಅದಕ್ಕೆ ನವಿಲುತೀರ್ಥ ಅಣೆಕಟ್ಟು ಎಂದೇ ಹೆಸರಿಟ್ಟಿದೆ.


ಸೌಗಂಧಿಯ ಕೋಟೆ: ರಟ್ಟ ಅರಸರ ಕಾಲದಲ್ಲಿ ಪರಸಗಢ ಎಂಬ ಕೋಟೆ ಸೌಗಂಧಿಯ ಹೃದಯಭಾಗದಲ್ಲಿನ ಎತ್ತರದ ಗುಡ್ಡದ ಮೇಲೆ ನೆಲೆನಿಂತಿದೆ. ಶತಮಾನಗಳ ಬಿಸಿಲು ಮಳೆಯನ್ನು ಕಂಡ ಕೋಟೆ ಈಗಲೂ ಸೌಗಂಧಿಪುರದ ಸಮೃದ್ಧಿಯನ್ನು ಸಾರುತ್ತಿದೆ. ಬ್ರಿಟಿಷರ ತೋಪುಗಳಿಗೆ ಎದೆಯೊಡ್ಡಿ ಅಲುಗದ ಕನ್ನಡಿಗರ ಕೋಟೆ. ಪ್ರಸ್ತುತ ಪ್ರವಾಸಿಗರ ಬೀಡು.


ಇದನ್ನು ಹೊರತುಪಡಿಸಿ ಇನ್ನೊಂದು ಕೋಟೆ ಪಟ್ಟಣದಿಂದ 2 ಕಿ.ಮೀ. ಅಂತರದಲ್ಲಿ ಇನ್ನೊಂದು ಬೆಟ್ಟದ ಮೇಲಿದೆ. ಆದರೆ, ಶತ್ರುಗಳ ಭಾರೀ ದಾಳಿ ಕೋಟೆಯನ್ನು ಅಭದ್ರಗೊಳಿಸಿದೆ.


ಇಷ್ಟಾಯಿತು ನಮ್ಮೂರಿನ ಪುಟಾಣಿ ಕಥೆ. ಪುರಾತನ ಸೌಗಂಧಿಯ ಹೆಸರು ಈಗಲೂ ಅಜರಾಮರವಾಗಿಬೇಕೆಂದು ಪಟ್ಟಣದ ಒಂದು ಪ್ರದೇಶಕ್ಕೆ ಸೌಗಂಧಿಪುರವೆಂದೇ ಹೆಸರಿಡಲಾಗಿದೆ.

ಸಮಯ ಸಿಕ್ಕರೇ ಒಮ್ಮೆ ನಮ್ಮೂರಿಗೆ ಬಂದು ಹೋಗಿ...

2 ಕಾಮೆಂಟ್‌ಗಳು:

kanavarike ಹೇಳಿದರು...

Ninna sougandi uroo ninnaste chend geleya. baravanigeyalle ellavannu heluv tavak ninnadu. adare enmadodu malaprabhe matra ninn baravanigeya tekkege sikkilla. chend baritiya. hige munduvaresu. ninage sahaya, sahakaradondige nanna shubah haraikegalu yavattu edde ede....

Inti ninn apreetiya mitra
Channu Mulimani

ಆಲಾಪಿನಿ ಹೇಳಿದರು...

ಚೆಂದದ ಸ್ವಾರಸ್ಯಕರ ನಿರೂಪಣೆ