
‘ನಿಂಗೇನಪ್ಪಾ, ಎರಡು ಯಾಕೆ ನಾಲ್ಕು ಆಗು. ಯಾರು ಕೇಳೋರು....?’ ಎಂಬ ಮಾತು ಪದೆ ಪದೇ ಕೇಳುತ್ತಿತ್ತು. ಕೆಲಸ ಮಾಡಲಾಗದೇ ಎದ್ದುಬಂದಿದ್ದೆ. ತುಂಬಾ ದೂರ. ಎಲ್ಲಿಗೆ, ಏಕೆ ಹೋಗಬೇಕು ಎಂಬ ಅರಿವಿಲ್ಲದೆ ನಡೆಯುತ್ತಿದೆ. ನಡೆದು ನಡೆದು ಕಾಲಲ್ಲಿ ನೋವು ಕಾಣಿಸಿಕೊಂಡಾಗ ವಾಸ್ತವ ಎದುರಾಯಿತು. ಸಿಕ್ಕ ಬೆಂಚಲ್ಲಿ ಕಾಲು ಚಾಚಿ ಕುಳಿತಾಗ ನನ್ನ ನಾನು ಕಂಡೆ.
ಅರೇ, ನನ್ನನ್ನು ನಾನೇ ನೋಡಿ ಎಷ್ಟೋ ವರ್ಷಗಳಾದವಲ್ಲ. ತುಂಬಾ ಓಡಿದ್ದೇನೆ. ಬದುಕು ಕಟ್ಟಿಕೊಳ್ಳಬೇಕೆಂಬ ಹವಣಿಕೆಯಲ್ಲಿ ಎಲ್ಲೆಲ್ಲೂ ನಡೆದಿದ್ದೇನೆ. ಹೀಗೆ ನಡೆಯುವಾಗ ಯಾರೋ ಪರಿಚಯವಾದರು, ಇಷ್ಟವಾದರೂ, ಕೆಲವರು ತುಂಬಾ ಇಷ್ಟವಾದರು. ಆದರೆ, ಬದುಕಬೇಕು, ಏನಾದರೂ ಸಾಧಿಸಬೇಕು ಎಂಬ ಕಾಲಚಕ್ರ ಕಟ್ಟಿಕೊಂಡವನಿಗೆ ಕೆಲವರು ಆಪ್ತರಾದರು, ಇನ್ನೂ ಕೆಲ ಆಪ್ತರೇ ದೂರಾದರು. ನಾನು ಹೀಗೇ ಬದಲಾಗಿದ್ದು ಅವರಿಗೆ ಇಷ್ಟ ಆಗಲಿಲ್ಲ. ಬೈದರು. ದ್ವೇಷಿಸಿದರು.
ನಾನೇ ದೂರವಾದೇ ಎಂದು ಅಂದುಕೊಂಡು ತಿರುಗಿ ನೋಡಿದಾಗ ಅವರೇ ನನ್ನಿಂದ ತುಂಬಾ ದೂರವಾಗಿದ್ದರು. ಆಗಲಿ ಬಿಡು, ಮೊದಲು ಗುರಿ ಮುಟ್ಟೋಣ. ಆಗ ಎಲ್ಲರಿಗೂ ನಾನು ಮಾಡಿದ್ದು ಸರಿ ಅನಿಸಬಹುದು ಎಂದು ಮುನ್ನಡೆದೆ. ಬಹುಷಃ ಅವರಿಗೆ ನಾನು ಅರ್ಥವಾಗಲಿಲ್ಲ. ಇನ್ನೂ ಅರ್ಥವಾಗಿಲ್ಲ. ಮುಂದೆಯೂ...
ಇರಲಿ. ಅವರಿಗೆ ನನ್ನ ಸ್ಥಿತಿ ತಿಳಿಯುವುದು ಬೇಡ. ಅದು ನಾಟಕೀಯವಾಗಬಹುದು. ಬೆಂಬಲಗಳು ಇಲ್ಲದೇ ಕೇವಲ ಭರವಸೆಗಳ ಮೇಲೆ ಬದುಕು ಕಷ್ಟ ಎಂದು ಆಗ ನಾ ಅರಿತಿದ್ದೆ. ಒಬ್ಬನೇ ಹಠಕ್ಕೆ ಬಿದ್ದವನಂತೆ ಕೆಲಸ ಬದಲು ಮಾಡಿದ್ದೆ. ಅದು ಮುಂದೆ ಸಾಗಿ ಒಂದು ಹಂತಕ್ಕೆ ಬಂದಿದೆ. ಈಗ ಅವರಿಗೆ ಅರ್ಥ ಮಾಡಿಸಿ ನಾನು ಸಾಧಿಸಬಯಸುವುದು ಏನೂ ಇಲ್ಲ. ಅವರು ತಿಳಿರುವಂತೆಯೇ ಇರಲಿ. ನಾನು ಇರುವಂತೆಯೇ ಇರುತ್ತೇನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ