ಶನಿವಾರ, ಅಕ್ಟೋಬರ್ 18, 2008

Common Man ಕ್ರಾಂತಿಯಾದೀತು ಎಚ್ಚರಿಕೆ

"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"...
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.

ಮೊನ್ನೆ 'A WEDNESDAY' ಹಿಂದಿ ಚಿತ್ರ ನೋಡಿದೆ. ನೋಡಲೇಬೇಕಾದ ಚಿತ್ರ. ಜನಸಾಮಾನ್ಯನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಚಿತ್ರ. ನಮಗೆ ಯಾವುದೇ ಶಕ್ತಿ, ಅಧಿಕಾರವಿಲ್ಲ ಎಂದು ಕೈಚೆಲ್ಲಿ ಕೂರುವ ಸಾಮಾನ್ಯನಿಗೆ ಆತನ ದಿವ್ಯ ಸಾಮರ್ಥ್ಯವನ್ನು ಸ್ಮರಿಸುತ್ತದೆ.

ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ರೈಲುಗಳಲ್ಲಿ ಬಾಂಬ್ ಇಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ದುಷ್ಟ ಶಕ್ತಿಯನ್ನು ಸರ್ವನಾಶ ಮಾಡುವ ಓರ್ವ ಸಾಮಾನ್ಯ ಮನುಷ್ಯನ ಏಕಾಂಗಿ ಹೋರಾಟವೇ 'A WEDNESDAY'. ನಮ್ಮ ಕುಟುಂಬ (ದೇಶ) ಗಲೀಜಾಗಿದೆ. ನಾವೇ, ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂಬುದೊಂದೇ ಸಾರ.

ಯಾವುದೇ ತಂತ್ರಜ್ಞ, ವಿದ್ವಾಂಸ, ಮುತ್ಸದ್ಧಿ ಕೂಡ ಸಾಮಾನ್ಯ ವ್ಯಕ್ತಿಯೇ. ಜನರಿಂದ ಗುರುತಿಸಲ್ಪಟ್ಟು ಗಣ್ಯರ ಸಾಲಿನಲ್ಲಿ ಕುಳಿತಿರುತ್ತಾನೆ. ಅದೇ ರೀತಿ, ಓರ್ವ ವಿದ್ವಾಂಸ ಇಂದು ಜನಸಾಮಾನ್ಯನಾಗಿರಬಹುದು. ಆತನಲ್ಲೂ ಬುದ್ಧಿ, ಶಕ್ತಿ ಎಲ್ಲವೂ ಇದೆ. ಗಣ್ಯರೆನಿಸಿಕೊಂಡವರಿಗಿಂತಲೂ ಹೆಚ್ಚಿಗಿದೆ. ಎಲ್ಲವೂ ಒಟ್ಟುಗೂಡಿದರೇ ಕ್ರಾಂತಿಗೆ ನಾಂದಿ.

ಈ ಚಿತ್ರದಲ್ಲಿ ಸಾಮಾನ್ಯನೋರ್ವ ತನ್ನ ಬುದ್ಧಿ ಚತುರತೆಯಿಂದ ನೂರಾರು ಜನರನ್ನು ಬಲಿತೆಗೆದುಕೊಂಡ ಉಗ್ರರನ್ನು ಯಮಪುರಿಗೆ ಅಟ್ಟುತ್ತಾನೆ. ಅಮಾಯಕನ ಸಾವಿನ ಆಕ್ರಂಧನ ನೋಡಿ ಕೇಕೆ ಹಾಕುವ ದುಷ್ಟರಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ. ಯಾವುದೇ ಹಾಡು, ಕುಣಿತ, ತಮಾಷೆಗಳಿಲ್ಲದ ಚಿತ್ರ ಕೇವಲ ಒಂದುವರೆ ಗಂಟೆಯಲ್ಲಿ ಸಮಾಜದ ಎಲ್ಲ ಮುಖಗಳನ್ನು ತೋರಿಸುತ್ತದೆ.

ನಾವು A Stupid Common Man ಆದ್ರೆ: ಕೆಲವೊಮ್ಮೆ ಆಗಲೇಬೇಕು ಅನಿಸುತ್ತೆ. ಇಂದಿನ ಭ್ರಷ್ಟ ರಾಜಕೀಯ, ದುಷ್ಟ ಆಡಳಿತ, ಲಂಚಗುಳಿತನ, ಮೋಸದ ರಂಗೋಲಿ ಕೆಳಗೇ ತೂರುವ ಖದೀಮರು, ಅನಿಷ್ಟ ಪದ್ಥತಿ. ಛೇ, ಇನ್ನೂ ಎಷ್ಟು ದಿನ ಸಹಿಸ್ಕೋಬೇಕು. ಅಡ್ಜಸ್ಟ್ ಮಾಡ್ಕೊಂಡು ಸಾಕಾಗಿದೆ.

ವ್ಯವಸ್ಥೆ ಹದಗೆಟ್ಟು ಗಬ್ಬುನಾರುತ್ತಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಚಿಲ್ಲರೆ ಹಣಕ್ಕಾಗಿ ವಂಚಿಸುವ ಕೆಲ ಬಸ್ ಕಂಡಕ್ಟರ್, ಪೊಲೀಸ್, ಸರಕಾರಿ ಕಚೇರಿಗಳಲ್ಲಿನ ಲಂಚುಗಳಿತನ, ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇನ್ನೂ ಕೋಟಿಗಟ್ಟಲೇ ನುಂಗುವ ತಿಮಿಂಗಲುಗಳ ಲೆಕ್ಕ ಹಾಕಲು ಸಾಧ್ಯವೆ.

ಆದರೆ ಸಾಮಾನ್ಯನ ಸಹನೆಗೂ ಮಿತಿಯಿದೆ. ಸಹನೆ ಮೀರಿದರೇ ಆತನನ್ನು ತಡೆಯುವವರಿಲ್ಲ. ಕ್ರಾಂತಿಯಾದೀತು ಎಚ್ಚರಿಕೆ. ಏಕೆಂದರೆ, ಮನೆಗೆ ಜಿರಳೆ ಬಂದರೆ ಸಾಯಿಸಬೇಕೇ ಹೊರತು ಸಾಕುವುದಿಲ್ಲ.

ಸೋಮವಾರ, ಸೆಪ್ಟೆಂಬರ್ 29, 2008

ಕನಸು ಕದ್ದ ಹುಡುಗಿ

Hi ಕೋತಿ,
ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ.

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣ ತಿಂತಾನೇ
ನನ್ನ ಪ್ರೀತಿ ಗೆಲ್ತಾನೆ...


ಯಾಕೋ ಹೀಗೆ ಸತಾಯಿಸ್ತಿಯಾ. ನಿದ್ದೆ ಮಾಡಕ್ಕೂ ಬಿಡಲ್ಲ, ಊಟ ಮಾಡಕ್ಕೂ ಆಗಲ್ಲ, ನಿಜಕ್ಕೂ ಕೂರಕ್ಕೂ ಆಗಲ್ಲ. ಏನೋ ಮೋಡಿ ಮಾಡಿದೆ ನೀನು. ನನ್ನ ಪ್ರತಿಯೊಂದು ಕೆಲಸದಲ್ಲೂ ನಿನ್ನ ಕಾಣ್ತೀನಿ. ನೀನು ನನ್ನ ಕಣ್ಣ ಮುಂದೆ ನಗ್ತಾ ನಿಂತಿರ್ತಿಯ, ಕಣ್ಣು ಹೊಡಿತೀಯ, ಕಣ್ಣಲ್ಲೇ ಮುದ್ದಾಡ್ತಿಯಾ.

ನಿನ್ನ ನೆನಪು ಇಲ್ಲದ ದಿನಗಳೇ ಇಲ್ಲ ಕಣೋ. ನನ್ನ ಉಸಿರು ಯಾವತ್ತು ನಿಲ್ಲುತ್ತೋ ಅವತ್ತೇ ನಿನ್ನ ನೆನಪನ್ನು ನನ್ನ ಜೊತೆಯಲ್ಲಿ ನಿಲ್ಲಿಸ್ತೀನಿ. ನೀನಿಲ್ಲ ಅಂದ್ರೆ ನಾನಿಲ್ಲ ಕಣೋ.

ಯಾಕೊ ಬಂದೆ. ನಾನು ಹಾಯಾಗಿದ್ದೆ. ಸ್ವಚ್ಛಂದ ಬಾನಿನಲ್ಲಿ ಸ್ವತಂತ್ರವಾಗಿ ಹಾರಾಡೋ ಪುಟ್ಟ ಹಕ್ಕಿ ತರ. ನೀ ಪ್ರೀತಿಯ ಬಂಧನದಲ್ಲಿ ನನ್ನ ಬಂಧಿಸಿಬಿಟ್ಟೆ. ಆದ್ರೆ ಆ ಬಂಧನ ಇಷ್ಟೊಂದು ಸಂತೋಷ ಕೊಡುತ್ತೆ ಅಂತಾ ಅಂದ್ಕೊಂಡೆ ಇರಲಿಲ್ಲ. ನಿನ್ನ ಎದುರು ನಿಂತಾಗಲೆಲ್ಲ ನನ್ನ ಮೈಯೆಲ್ಲ ರೋಮಾಂಚನವಾದಂತಾಗುತ್ತೆ. ಕೈಯಲ್ಲಿ ನಡುಕ ಬಂದು ಹೇಳಬೇಕೆಂದಿದ್ದ ಮಾತುಗಳು ಉಡುಗಿಹೋಗುತ್ತೆ. ಏನೇನೋ ನೂರಾರು ಕನಸುಗಳು, ಹೇಳಲಾಗದ ಆಸೆಗಳು. ಏನು ಅಂತಾ ಹೇಳಲಾ...

ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯ ಹಾಗೆ ನಾ ಇರುವೆನು ನಿನ್ನಲಿ
ಅಪ್ಪಿಕೋ ನಿನ್ನಲಿ ನಿನ್ನೆದೆ ಚಿಪ್ಪಲಿ
ಸ್ವಾತಿಯ ಮುತ್ತಿನ ಹಾಗೆಯೇ ನಿನ್ನಲಿ...

ಎಂದೆಂದೂ ನೀ ನನ್ನ ಜೊತೆಯೇ ಇರ್ತಿಯಾ ಅಲ್ವ...

ಸಂಜೆಯ ಹೊತ್ತಲ್ಲಿ ಸಮುದ್ರದ ತೀರದಲ್ಲಿ ಸೂರ್ಯನ ಕಿರಣವು ಆಗಸವನ್ನು ಸುಂದರವಾದ ಬಣ್ಣಗಳಿಂದ ಕೆಂಪೇರಿಸುತ್ತೆ. ನೋಡು, ಆ ಸೌಂದರ್ಯವನ್ನು ನೋಡುತ್ತ ನಾನು ನೀನು ಮೈ ಮರೆಯಬೇಕು. ತಂಪಾದ ತಂಗಾಳಿಯನ್ನು ಸವಿಯುತ್ತಾ ನೀರಿನ ಅಲೆಗಳ ಮೇಲೆ ನೀನು ನಾನು ಜೊತೆ ಜೊತೆಯಲಿ ಹೆಜ್ಜೆ ಹಾಕಬೇಕು. ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ನಾನು ಮರೀಬೇಕು. ನಿನ್ನ ಮಡಿಲಲ್ಲಿ ಮಲಗಿ ಸಣ್ಣ ಮಗುವಾಗಬೇಕು. ಇನ್ನೂ ಏನೇನೋ ಆಸೆ ಕಣೋ.

ನಾನು ನೀನು ಜೊತೆ ಸೇರಿ ನಮ್ಮದೇ ಆದ ಪ್ರೀತಿಯ ಗೂಡನ್ನು ಪುಟ್ಟದಾಗಿ ಕಟ್ಟಿ ಅಲ್ಲೇ ಸಂತೋಷವಾಗಿ ಕಳೆಯಬೇಕು. ನಿನ್ನ ನಾನು, ನನ್ನ ನೀನು ತುಂಬಾ ತುಂಬಾನೇ ಪ್ರೀತಿಸಬೇಕು. ಏನು, ಹುಚ್ಚಿ ತರ ಬರೀತಿದಾಳೆ ಅಂತ ಅಂದ್ಕೊತೀಯಾ. ಹೌದು ಕಣೋ ನಾನು ಹುಚ್ಚಿನೇ. ನಿನ್ನ ಪ್ರೀತಿಲಿ ನಾನು ಹುಚ್ಚಿ.
ಹೇಳು ನನ್ನ ಜೊತೆ ಇರ್ತಿಯಾ ಅಲ್ವ....

ನಿನ್ನವಳು

ಭಾನುವಾರ, ಸೆಪ್ಟೆಂಬರ್ 14, 2008

ಪ್ಲೀಸ್...ಸಾಕು

ಬೆಳಗ್ಗೆ ಪೇಪರ್ ನೋಡುತ್ತಿದ್ದಂತೆಯೇ ಸರಣಿ ಸ್ಫೋಟ, 30 ಸಾವು. ಇದೇನು ಮಹಾ!. ದೇಶದ ಹಣದುಬ್ಬರ ಏರಿಳಿಯುವಂತೆ ಇದೂ ಸಾಮಾನ್ಯ ಸಂಗತಿ. ಇಂತಹ ಅಭಿಪ್ರಾಯ ಜನಸಾಮಾನ್ಯರಿಂದ ವ್ಯಕ್ತವಾದರೆ ಅಚ್ಚರಿಯೇನಲ್ಲ.

ಬೆಳಗ್ಗಿನ ಓಡಾಟ, ಬಸ್ಸು, ಟ್ರಾಫಿಕ್ಕು, ಆಫೀಸ್, ಮತ್ತೆ ಬಸ್ಸು, ಟ್ರಾಫಿಕ್ಕು, ಕಿರಿಕ್ಕು... ಇವುಗಳ ನಡುವೆ ಬಾಂಬ್ ಸ್ಫೋಟ, ರಕ್ತಪಾತ. ಪರವಾಗಿಲ್ಲ. ನಾವು ಅಡ್ಜಸ್ಟ್ ಮಾಡ್ಕೋತೀವಿ. ಏಕೆಂದರೆ ನಾವು ಇರೋದು ಅದಕ್ಕೆ ಅಲ್ಲವೇ.

ಮೊನ್ನೆಯಷ್ಟೇ ನಾವೆಲ್ಲ ನಡೆದಾಡುವ ಬೆಂಗಳೂರಿನ ಫುಟ್ ಪಾತ್ ನಲ್ಲಿ ಸ್ಫೋಟಗಳಾದವು. ಒಂದಲ್ಲ, ಎರಡಲ್ಲ ಒಂಭತ್ತು ಸ್ಫೋಟ. ಅಲ್ಲಿಯವರೆಗೂ ನಿದ್ರೆಯಲ್ಲಿದ್ದ ಸರ್ಕಾರ ಮತ್ತು ಪೊಲೀಸನವರು, "ಮಲಗಿದ ಹುಲಿಯನ್ನು ಎಬ್ಬಿಸಿದ್ದೀರಿ, ನಿಮ್ಮ ಸಾವನ್ನು ನೀವೇ ಆಹ್ವಾನಿಸಿದ್ದೀರಿ" ಎಂಬಂತೆ ಅಬ್ಬರಿಸಿದರು. ಬೆನ್ನಲ್ಲೇ, ಅಲ್ಲಲ್ಲಿ ದಾಳಿ, ಶಂಕಿತರ ಬಂಧನ, ಪಿತೂರಿ, ಖಂಡನೆ, ಸಂತ್ರಸ್ತರಿಗೆ ಪುಡಿಗಾಸು... ಹೀಗೇ ವಿಧವಿಧ ಹೆಡ್ಡಿಂಗ್್ಗಳು ಪತ್ರಿಕೆಗಳಲ್ಲಿ ರಾರಾಜಿಸಿದವು. ಇದರೊಂದಿಗೆ, ಆರೋಪ-ಪ್ರತ್ಯಾರೋಪಗಳು ಯಥೇಚ್ಛೆವಾಗಿಯೂ ಹರಿದುಬಂದವು. ಆಮೇಲೆ...ಬೆಂಗಳೂರಿನ ಟ್ರಾಫಿಕ್ ಗಲಾಟೆ ನಡುವೆ ಬಾಂಬ್ ಸದ್ದು ಕೇಳಲೇ ಇಲ್ಲ.

ಆದರೆ ಇದರಿಂದ ಲಾಭ ಆಗಿದ್ದಾದ್ದರೂ ಯಾರಿಗೆ? ಬಾಂಬ್ ಸ್ಫೋಟ ಮಾಡಿದವರು ‘ಜಿಹಾದ್' ಅಥವಾ ಸೇಡು ಅಂತಾರೆ. ಆಮೇಲೆ ಯಾವುದೋ ಮೂಲೆಯಲ್ಲಿ ಅಡುಗಿ ಕುಳಿತುಕೊಳ್ಳುತ್ತಾರೆ. ಅಲ್ಲಿಗೆ ಅವರ ಮಹಾನ್ ಸಾಧನೆ (!) ಮುಗಿಯಿತು. ಅವರನ್ನು ಹಿಡಿಯಲಾಗದ ಪೊಲೀಸರು ಪತ್ರಿಕೆಗಳ ಮುಂದಷ್ಟೇ ಅಬ್ಬರಿಸುತ್ತಾರೆ. ಕೆಲ ದಿನಗಳ ನಂತರ ಬಿಸಿ ಆರಿದ ಮೇಲೆ ಬಾಂಬ್ ಮಾತೇ ಇಲ್ಲ. ಇನ್ನೂ ರಾಜಕಾರಣಿಗಳು ಇದನ್ನೇ ಯದ್ವಾತದ್ವಾ ಎಳೆದಾಡಿ ತಮ್ಮ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಹೋಗಲೀ ಬಿಡಿ ಅದೆಲ್ಲ ಅವರ ಸ್ವಹಿತಾಸಕ್ತಿ.

ಆದರೆ, ಬಲಿಯಾದವನು ಬಡಪಾಯಿ ಪ್ರಜೆ ಮಾತ್ರ. ಸಾವಿನ ಮನೆ ತಲುಪುವವನು ಜನಸಾಮಾನ್ಯ. ಬೀದಿಗೆ ಬರುವುದು ಆತನ ಕುಟುಂಬ. ಭಿಕ್ಷೆ ಬೇಡುವುದು ಬಡವನ ಮಕ್ಕಳು... ಆಮೇಲೆ ಈ ಸತ್ತವ, ಆತನ ಕುಟುಂಬ ಎಲ್ಲೋ ನಶಿಸಿ ಹೋಗುತ್ತದೆ. ಕೇಳುವವರು ಯಾರೂ ಇಲ್ಲ.

ಆದರೆ, ಬೇರೆಲ್ಲವೂ ಸಾಮಾನ್ಯವಾಗಿಯೇ ಇರುತ್ತದೆ. ಜನಜೀವನ ಸಾಮಾನ್ಯ, ಸರ್ಕಾರದ ಕುರ್ಚಿ ಭದ್ರ, ಎಂದಿನಂತೆ ಟ್ರಾಫಿಕ್, ಯಾಂತ್ರಿಕ ಜೀವನ... ಮುಂದೇನು? ಮತ್ತೆ ಸರಣಿ ಸ್ಫೋಟ!

ಹೌದು. ಈಗ ಆಗಿದ್ದು ಇದೇ. ಬೆಂಗಳೂರು, ಅಹ್ಮದಾಬಾದ್ ಇದೀಗ ದೆಹಲಿ.....ಮುಂದೆ? ಇದಕೆಲ್ಲ ಅಂತ್ಯ ಯಾವಾಗ? ನಾವು ನಿರಮ್ಮಳವಾಗಿ ಬದುಕುವುದು ಯಾವಾಗ? ಸೇಡು ಯಾವಾಗ ಮುಗಿಯುತ್ತೆ? ಬಡವರ ರಕ್ತ ಬೀದಿಪಾಲಾಗುವುದು ನಿಲ್ಲುವುದ್ಯಾವಾಗ?

ಬುಧವಾರ, ಆಗಸ್ಟ್ 20, 2008

ಪಾರ್ಟಿ ಕೊಟ್ಟು ಡಾಕ್ಟರ್ ಆದ...

ಮೊನ್ನೆ ಊರಿಗೆ ಹೋಗಿದ್ದಾಗ ಧೋ ಅಂತಾ ಮಳೆ. ಅಪರೂಪಕ್ಕೊಮ್ಮೆ ಊರಿಗೆ ಹೋದ್ರೂ ಹೊರಗೆ ಹೋಗದಂತ ಸ್ಥಿತಿ. ಎರಡು ದಿನ ಮನೆಯಿಂದ ಹೊರಗೆ ಹೋಗದಂತೆ ಮಳೆ ಕಟ್ಟಿಹಾಕಿತ್ತು. ಹಾಗೇ ಮನೆಯಲ್ಲಿ ಬೆಚ್ಚಗೆ ಕುಳಿತು ಆಗೊಮ್ಮೆ ಈಗೊಮ್ಮೆ ಆಡುಗೆ ಮನೆ ಇಣುಕಿ ಬಿಸಿ ಟೀ ಚಪ್ಪರಿಸಿ ಟಿವಿಯಲ್ಲಿ ಚಾನೆಲ್ ಸುತ್ತುವರಿಯುತ್ತಿದ್ದೆ. ಇನ್ನೇನು ಸಂಜೆ ಆಗಿತ್ತು ಮನೆಗೆ ಅಕ್ಕನ ಕುಟುಂಬದ ಮೆರವಣಿಗೆ ಬಂತು.

ಮಳೆಯಲ್ಲಿ ಸಂಪೂರ್ಣ ನೆನೆದು ಬಂದಿದ್ದ ಅವರು ಊಟ ಮಾಡಿ ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ನನ್ನ ಮುದ್ದಿನ ಹುಡುಗಿಗೆ ವಿಪರೀತ ಜ್ವರ, ನೆಗಡಿ. ಜ್ವರದಿಂದ ನನ್ನ ಹುಡುಗಿ ಮೆತ್ತಾಗಿಗಿದ್ಲು. ಹಣೆ ಮುಟ್ಟಿ ನೋಡಿದೆ ಬೆಂಕಿಯಾಗಿತ್ತು. ಮನಸ್ಸು ಮುದುಡಿದಂತಾಯಿತು. ಇನ್ನೂ 4 ವರ್ಷದ ಮಗುವಲ್ವಾ ಪ್ರೀತಿ ತುಂಬಿ ಬಂತು. ಆದರೆ, ರಾತ್ರಿ 11 ಗಂಟೆಗೆ ಯಾವ ಅಂಗಡಿ, ಆಸ್ಪತ್ರೆ ತೆರೆದಿರುತ್ತೆ ಅಂತಾ ಯೋಚಿಸ್ತಿದ್ದೆ.

ಅಷ್ಟರಲ್ಲಿ ನೆನಪಾದವನು ನನ್ನ ಗೆಳೆಯ, ವೃತ್ತಿಯಲ್ಲಿ ವೈದ್ಯ, ಡಾ.ಮರೆಪ್ಪ. ಕೂಡಲೇ ಮೊಬೈಲು ಕಿವುಚಿ ಅವನಿಗೆ ಫೋನ್ ಮಾಡಿದೆ. ಇನ್ನೂ ತನ್ನ ಕ್ಲಿನಿಕ್‌ನಲ್ಲಿಯೇ ಇದ್ದ ಡಾಕ್ಟರ್‌ಗೆ ಮಗುವಿನ ಅನಾರೋಗ್ಯದ ಕುರಿತು ಹೇಳಿದೆ. ಐದೇ ನಿಮಿಷದಲ್ಲಿ ಬರ್ತೀನಿ ಅಂತಾ ಫೋನಿಟ್ಟ. ಮನೆಯವರಿಗೆ ವಿಷಯ ತಿಳಿಸಿ ನನ್ನ ಕೋಣೆಗೆ ಬಂದಾಗ ಗೆಳೆಯರ ಬಳಗದಲ್ಲಿಯೇ ವಿಶೇಷವೆನಿಸಿದ್ದ ಮರೆಪ್ಪನ ಹಿಂದಿನ ತುಂಟಾಟಗಳು ನೆನಪಾದವು.

----
ಮರೆಪ್ಪ ನನ್ನ ಬಾಲ್ಯ ಸ್ನೇಹಿತ. ಓದಿನಲ್ಲಿ ಚುರುಕಿದ್ದರೂ ಭಯಂಕರ ತುಂಟಾಟ ಮಾಡುತ್ತಿದ್ದ. ಹೊಡೆತಕ್ಕೂ ಸೈ, ಹೊಡೆಯುವುದಕ್ಕೂ ಸೈ. ಪ್ರೌಢ ಶಾಲೆಯ ಬಳಿಕ ವಿಜ್ಞಾನ ವಿಷಯ ಪಡೆದು ಬೇರೆ ಕಾಲೇಜು ಸೇರಿಕೊಂಡ ಮರೆಪ್ಪ ಪ್ರತಿ ದಿನ ಸಂಜೆ ಭೇಟಿಯಾಗುತ್ತಿದ್ದ. ನಮ್ಮ ಸ್ನೇಹಿತರ ಗುಂಪಲ್ಲಿ ಮರೆಪ್ಪ ಇಲ್ಲದಿದ್ದರೆ ಏನೋ ಕೊರತೆ.

ಅದೇನಾಯಿತೋ ಒಂದು ದಿನ ನಮ್ಮೊಂದಿಗೆ ಕಾಲು ಕೆರೆದು ಜಗಳ ತೆಗೆದ. "ಇನ್ನೂ ಮುಂದೆ ನೀವೆಲ್ಲ ನನ್ನ ಮರೆಪ್ಪ ಅಂತಾ ಕರೀಬೇಡ್ರಿ. ನಾನು ಈಗ ಬಿಎಎಂಎಸ್ ಮಾಡ್ತೀದೀನಿ. ಮರೆಪ್ಪ ಅಂತಾ ಕರೆದ್ರೆ ಒಂಥರಾ ಆಗುತ್ತೆ" ಎಂದ. ನಮಗೆಲ್ಲ ಇನ್ನೂ ಗೇಲಿ ಮಾಡಬೇಕೆನಿಸಿತು. "ಹಾಗಾದ್ರೆ ಏನು ಅಂತಾ ಕರೀಬೇಕು" ಅಂದಾಗ, "ನಾನು ಮರೆಪ್ಪ ಬದಲಿಗೆ ಮಂಜು ಅಂತಾ ಹೆಸರು ಇಟ್ಕೋಂಡಿದೀನಿ. ಇನ್ಮೇಲೆ ನೀವು ಡಾ.ಮಂಜು ಅಂತಾ ಕರಿಬೇಕು" ಎಂದು ಹೇಳಿದ.

ಆಗ ನಾವೆಲ್ಲ ಆಯ್ತಪ್ಪಾ ಹಾಗೇ ಕರಿತೀವಿ. ಆದ್ರೆ ನಮಗೆಲ್ಲರಿಗೂ ನೀನು ಪಾರ್ಟಿ ಕೋಡ್ಬೇಕು ಅಂತಾ ಹೇಳಿದಾಗ ಅದ್ಯಾವ್ ಪರಿ ಖುಷಿ ಆಯ್ತೋ, ಕೂಡಲೇ ಸುಮಾರು 15 ಹುಡುಗರ ಗುಂಪನ್ನು ನಮ್ಮೂರಿನ ಅತೀ ದೊಡ್ಡ ಹೋಟೇಲ್‌ಗೆ ಕರೆದೋಯ್ದು ಊಟದ ಪಾರ್ಟಿ ನೀಡಿದ.

ಎಲ್ಲರೂ ತಿಂದು-ತೇಗಿ ಹರಟೆ ಹೊಡೆಯುತ್ತ ಮನೆಕಡೆ ಬರುತ್ತಿದ್ದಾಗ ಎದುರಿಗೆ ಬಂದ ಇನ್ನೊಬ್ಬ ಗೆಳೆಯ, ಏನೋ ಇಷ್ಟೊಂದು ಜನ ಎಲ್ಲಿಗೆ ಹೋಗಿದ್ರಿ ಅಂತಾ ಕೇಳಿದ. ಆಗ ನಾವೆಲ್ಲ "ಮರೆಪ್ಪ, ನಮಗೆಲ್ಲ ಪಾರ್ಟಿ ಕೊಟ್ಟ. ಇನ್ಮೆಲೆ ಅವನಿಗೆ ಮರೆಪ್ಪ ಅಂತಾ ಕರೀಬಾರ್ದು, ಮಂಜು ಎಂದು ಕರೀಬೇಕಂತೆ. ಅದಕ್ಕೆ ಪಾರ್ಟಿ" ಅಂತಾ ಅಂದಾಗ ಮರೆಪ್ಪನ ಮುಖ ಇಂಗು ತಿಂದ ಮಂಗನ ಹಾಗಾಗಿತ್ತು.

ಇಂತದ್ದೆ ಇನ್ನೊಂದು ಪ್ರಸಂಗ. ನಮ್ಮ ಮರೆಪ್ಪನಿಗೆ ಆಯುರ್ವೇದದ ಮೇಲೆ ಅದ್ಯಾವ್ ಪರಿ ನಂಬಿಕೆ ಇತ್ತು ಅಂದ್ರೆ ತನ್ನ ಮೇಲೆಯೇ ಹೊಸ ಹೊಸ ಪ್ರಯೋಗ ಮಾಡುತ್ತಿದ್ದ. ಇನ್ನೂ 24 ದಾಟದ ಮರೆಪ್ಪನಿಗೆ ಕೂದಲು ಉದುರತೊಡಗಿದವು. ನಾವೆಲ್ಲ ಗೇಲಿ ಮಾಡ್ತೀವಿ ಅಂತಾ, ಮೊದಲೇ ಯಾವುದೋ ಆಯುರ್ವೇದದ ಔಷಧಿ ಖರೀದಿಸಿ ತಲೆಗೆ ಬಳಿದುಕೊಂಡಿದ್ದ. ಮರುದಿನ ಅವನ ಮುಖ ದೊಡ್ಡ ಕುಂಬಳಕಾಯಿ ಗಾತ್ರದಲ್ಲಿ ಬಾತುಕೊಂಡಿತ್ತು. ಮತ್ತೆ ಅದು ಕಡಿಮೆ ಆಗಲು ಇನ್ನೊಂದು ಔಷಧಿ ತೆಲೆಗೆ ಬಳಿದುಕೊಂಡ!.

ಇಂತಿಪ್ಪ ನಮ್ಮ ಮರೆಪ್ಪ, ಕ್ಷಮಿಸಿ ಈಗ ಮಂಜು ಬಿಎಎಂಎಸ್ ಮುಗಿಸಿ ಡಾಕ್ಟರ್ ಆದ. ಹುಬ್ಬಳ್ಳಿಯಲ್ಲಿ ಒಂದೆರಡು ದೊಡ್ಡ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡಿ ಹೆಸರೂ ಮಾಡಿದ್ದಾನೆ. ಮೊನ್ನೆ ಮೊನ್ನೆ ನನ್ನ ಕೈಗೆ ದೊಡ್ಡ ಗಾಯವಾದಾಗ ಇವನೇ ಚಿಕ್ಕದಾಗಿ ಆಪರೇಶನ್ ಕೂಡ ಮಾಡಿ ಚಿಕಿತ್ಸೆ ನೀಡಿದ್ದ. ಇತ್ತೀಚೆಗಷ್ಟೇ ವಾಪಾಸ್ ನಮ್ಮ ಸೌಗಂಧಿಗೆ ಬಂದು ಇಲ್ಲಿಯೇ ಒಂದು ಪುಟ್ಟ ಕ್ಲಿನಿಕ್ ತೆಗೆದಿದ್ದಾನೆ. ನಮ್ಮ ಸ್ನೇಹಿತರಿಗೆ ಹಾಗೂ ನಮ್ಮ ಕುಟುಂಬಗಳಿಗೆ ಈಗ ಇವನೇ ಫ್ಯಾಮೀಲಿ ಡಾಕ್ಟರ್.
----

ಬಾಗಿಲ ಬಳಿ ಬೈಕ್ ಸದ್ದು ಕೇಳಿದಾಗ ನೆನಪಿನಂಗಳದಿಂದ ಹೊರಗೆ ಬಂದೆ. ಡಾ.ಮರೆಪ್ಪ ನಗುತ್ತಾ ಬಾಗಿಲ ಬಳಿ ನಿಂತಿದ್ದ. ಸ್ನೇಹಿತನಾದರೂ ಈಗ ಡಾಕ್ಟರ್‌ನಾದ್ದರಿಂದ ನೇರವಾಗಿ ವಿಷಯಕ್ಕೆ ಬಂದ. ಅಕ್ಕನ ಮಗುವನ್ನು ಪರೀಕ್ಷಿಸಿ ತನ್ನಲ್ಲಿದ್ದ ಒಂದಿಷ್ಟು ಔಷಧಿ ಕೊಟ್ಟು ಇವತ್ತು ರಾತ್ರಿಗೆ ಇದನ್ನು ಕೊಡಿ. ನಾಳೆ ನಾನು ಬರೆದು ಕೊಡುವ ಔಷಧಿ ತಂದು ಕೊಡಿ ಎಂದು ಹೇಳಿದ.

ಹೊರಗೆ ಬಂದು ಆತನ ಕೈಕುಲುಕಿ, ನಡುರಾತ್ರಿಯಲ್ಲಿ ಬಂದು ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಸ್ ಡಾ. ಮರೆಪ್ಪ ಅವರೇ ಎಂದು ಹೇಳಿದಾಗ, "ನಾನು ಮರೆಪ್ಪ ಅಲ್ಲ, ಡಾ.ಮಂಜು. ನಾಳೆ ಬೆಳಗ್ಗೆ ಕ್ಲಿನಿಕ್ ಹತ್ರ ಬಾ ಡಬ್ಬಲ್ ಫೀ ತಗೋತೀನಿ" ಎಂದಾಗ ನನಗೆ ನಗು ತಡೆಯಲಾಗಲಿಲ್ಲ.

ಶುಕ್ರವಾರ, ಜುಲೈ 25, 2008

ಸಾಗರ ತಟದೀ ಚಿತ್ತ ಚಂಚಲೆ...


"ನೋ ಅದು... ನೀರಲ್ಲೇ ಹೋಗ್ತಿಯಾ.. ನೋಡು ಪ್ಯಾಂಟ್ ಎಲ್ಲಾ ಗಲೀಜಾಯ್ತು. ಇನ್ನೂ ಚಿಕ್ಕ ಹುಡುಗನಪ್ಪಾ ನೀನು" ಎಂದು ಆಕೆ ಹುಸಿಕೋಪದಿಂದ ಗುಣುಗುತ್ತಿದ್ದರೆ ಅವಳ ಮುಖವನ್ನು ಇನ್ನಷ್ಟು ಕೆಂಪಾಗಿಸಬೇಕೆಂಬ ಆಸೆ ಹೆಚ್ಚಾಯ್ತು.

"ಆಗಲೀ ಬಿಡೆ. ಸಮುದ್ರ ತೀರದಲ್ಲಿ ನೀರಿನೊಂದಿಗೆ ಚೆಲ್ಲಾಟ ಆಡೋಕೆ ನಂಗಿಷ್ಟ. ನೀನು ಬಾರೇ. ಸೊಗಸಾಗಿದೆ" ಎಂದಾಗ ಅವಳು ಮುಖ ಸೊಟ್ಟಗೆ ಮಾಡಿದಳು.

ಆಹಾ..ಏನು ಚಂದ ಕಾಣಿಸ್ತಿಯೇ ಎಂದೊಡನೆ ಗಲ್ಲ ಉಬ್ಬಿಸಿ, ಹೌದೌದು. ಸಾಕು ಆಟ ಎಂದು ಗುರುಗುಟ್ಟಿದಳು.

ಇನ್ನೂ ಪೀಡಿಸಿದರೆ ಬೈದಾಳು ಅಂತಾ ದಂಡೆಗೆ ಬಂದೆ. ಆಗಲೇ ತೊಯ್ದು ತೊಪ್ಪಗಾಗಿದ್ದ ನನ್ನ ಪ್ಯಾಂಟು ಮರಳನ್ನು ಅಪ್ಪಿಕೊಳ್ಳಲಾರಂಭಿಸಿತು.

"ನೋಡಿದೀಯಾ. ಪ್ಯಾಂಟ್ ಹೇಗಾಯ್ತು. ನಾನು ಹೇಳಿದ್ರೆ ಕೇಳೋಲ್ಲ ನೀನು" ಎಂದು ಕೋಪಿಸಿದಳು. "ಇರಲಿ ಬಿಡೆ. ಬಯಲುಸೀಮೆ ಹುಡುಗ ನಾನು. ಇಂಥಾ ಸುಂದರ ಸಮುದ್ರ ಕಾಣೋದೇ ನನಗೆ ಅಪರೂಪ. ಅದಕ್ಕೆ ಮನಸಾಯ್ತು. ಹೌದು, ಇಷ್ಟೊಂದು ಸುಂದರ ಸಾಗರ ತೀರ, ಗರಿಗರಿ ಮರಳ ನಡುವೆ ಮನೆ ಇದ್ದರೂ ಬೀಚ್್ಗೆ ಬರೋಕೆ ನಿನಗ್ಯಾಕೆ ಇಷ್ಟ ಇಲ್ಲ" ಅಂತಾ ಪ್ರಶ್ನಿಸಿದೆ.

ಅಯ್ಯೋ, ದಿನಾಲು ಇದೇ ತೀರದಲ್ಲಿ ಓಡಾಡ್ತೀವಿ. ಇದರಲ್ಲೆನೋ ವಿಶೇಷ ಎಂದಾಕೆ ಹೇಳಿದಾಗ ನನಗೇನು ಹೇಳ್ಬೇಕು ತಿಳಿಲಿಲ್ಲ. ನಮಗೆ ದೂರದ ಬೆಟ್ಟ ನುಣ್ಣಗೆ, ಆದರೆ ಅವಳಿಗೀದು ಸಹಜ ಸಂಗತಿ. ಅದೂ ನಿಜಾನೇ ಅಂತಾ ಸುಮ್ಮನಾದೆ.

ಆಗಲೇ ಸೂರ್ಯ ನೆತ್ತಿಗೇರಿ ನಮ್ಮ ನೆತ್ತಿ ಸುಡುತ್ತಿದ್ದ. ಅವಳು ತನ್ನ ದುಪ್ಪಟ್ಟಾವನ್ನೇ ತಲೆಗೆ ಸುತ್ತಿಕೊಳ್ಳುತ್ತಾ, ಸಾಕು ಬಾ ಹೋಗೋಣ ಎಂದು ಕೈಹಿಡಿದು ಮುನ್ನಡೆದಳು.

"ಹೌದು ಏಕಾಏಕಿ ನನ್ನ ಹುಡುಕಿಕೊಂಡು ಇಲ್ಲಿಗೇಕೆ ಬಂದೆ. ದಿನಾಲೂ ಭೇಟಿಯಾಗ್ತಿವಲ್ಲ. ಏನು ವಿಶೇಷ" ಎಂದು ಹುಬ್ಬೇರಿಸಿದಳು.

ಹಾಗೇ ಸುಮ್ಮನೆ ಬರಬೇಕು ಅನಿಸ್ತು ಬಂದೆ. ಅಲ್ಲದೇ... ಎಂದು ಮಾತು ನಿಲ್ಲಿಸಿದಾಗ, ತುಸು ನಿಂತು ಏನೆಂದು ಪ್ರಶ್ನಿಸಿದಳು.

ಖಾಲಿ ಕೈ ಬೀಸುತ್ತಾ ಬಂದಿದ್ದ ನಾನು ಕಿಸೆಗೆ ಕೈಹಾಕಿ ಚಿಕ್ಕ ಪೊಟ್ಟಣವೊಂದನ್ನು ಅವಳ ಕೈಗಿತ್ತೆ. ನನ್ನ ಮುಖ ನೋಡಿ ಅಚ್ಚರಿಯೊಂದಿಗೆ ಬಿಚ್ಚಿ ನೋಡಿದಳು. ಅವಳ ಪುಟ್ಟ ಕೈ ತುಂಬುವಷ್ಟು ಬಳೆಗಳು. ಖುಷಿಯಿಂದ ಮುಟ್ಟಿ ನೋಡಿ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿದಳು. ನಾಳೆ ಹಾಕಿಕೊಂಡು ಬಾ. ನೋಡ್ಬೇಕು ಅಂದೆ.

ಅದೇ ಮೊದಲ ಬಾರಿ ಒಂದು ಮಾತೂ ಆಡದೇ ಮುಗ್ಧ ಮೊಗದೊಂದಿಗೆ ನನ್ನೆಡೆಗೆ ಪ್ರೀತಿಯಿಂದ ನೋಡಿ, ಕಣ್ಣೊಳಗಿನ ಮಾತು ಅರಿತು ಸುಮ್ಮನಾದಳು. ನಾಲ್ಕು ಹೆಜ್ಜೆ ಸವೆದರೂ ಇಬ್ಬರ ನಡುವೆ ಮೌನವೇ ಮಾತಾಯಿತು.

"ಸರಿ, ನಂಗೆ ಟೈಮಾಯ್ತು. ಮನೆಯಲ್ಲಿ ಕಾಯ್ತಿರ್ತಾರೆ. ನಾಳೆ ಸಿಗ್ತೀನಿ" ಎಂದು ದಾರಿ ಬದಲಿಸಿದಳು.

ಮಾತು ಮರೆತಿದ್ದ ನಾನು, ಹೂಂಗುಟ್ಟಿ ಮುಂದೆ ನಡೆದೆ. ತುಸು ದೂರ ಸಾಗಿದ ಮೇಲೆ ತಿರುಗಿ ನೋಡಿದರೆ, ಮನೆಯ ಮೂಲೆಯಲ್ಲಿ ನಿಂತಿದ್ದಳು ನನ್ನ ಚಿತ್ತ ಚೆಂಚಲೆ ಚಿತ್ರಾವತಿ. ಆ ಮುದ್ದು ಮುಖವ ಮನದಲ್ಲಿ ತುಂಬಿ ಮುಂದೆ ಸಾಗಿದೆ.

ಮರುದಿನ ಎದುರು ಸಿಕ್ಕಾಗ, ತನ್ನೆರಡು ಕೈ ಮೇಲೆತ್ತಿ ಬಳೆಗಳ ಗಲ್್ಗಲ್ ನಾದ ಹೊರಡಿಸಿದಾಗ ನನ್ನೆದೆಯಲ್ಲಿ ಪ್ರೀತಿಯ ಕಲರವ ಅಲೆಯಾಗಿ ಬಂತು...

ಮಂಗಳವಾರ, ಜುಲೈ 22, 2008

ಯಾರಿವಳು ಸೌಗಂಧಿ...?

ನಿಮಗೂ ಈ ಪ್ರಶ್ನೆ ಕಾಡಿರಬಹುದಲ್ಲವೇ? ಬಹುಷಃ ಯಾವುದೋ ಹುಡುಗಿಯ ಹೆಸರೋ ಅಥವಾ ಆಕೆಯ ಹೆಸರು ಸೂಚಿಸುವ ಕಲ್ಪನೆಯ ಹೆಸರು ಇರಬಹುದು ಎಂದು ಅನಿಸುವುದು ಉಂಟು. ನಿಮ್ಮ ಕಲ್ಪನೆ ಸ್ವಲ್ಪ ನಿಜವೂ ಹೌದು. ಇವಳು ನನ್ನ ಸುಂದರಿಯೇ.


ಹೆಸರು ಸೌಗಂಧಿ. ಪೂರ್ಣ ಹೆಸರು ಸೌಗಂಧಿಪುರ. ನದಿಯಂಚಿನಲ್ಲಿ ಗುಡ್ಡಗಳ ಸಾಲುಗಳ ನಡುವೆ ನಿಂತಿರುವ ನಯನ ಮನೋಹರಿ... ಅರ್ಥವಾಯಿತೆಂದುಕೊಂಡಿದ್ದೇನೆ. ಇದು ನನ್ನ ಊರು. ರಾಜ ಮಹಾರಾಜರ ಕಾಲದಲ್ಲಿ ಸೌಗಂಧಿಪುರವೆಂದು ಖ್ಯಾತಿಯಾಗಿದ್ದ ಪರಿಮಳದ ನಾಡು.

ಬೆಳಗಾವಿ ಜಿಲ್ಲೆಯ ಈಗಿನ ಸವದತ್ತಿಯೇ ಆಗಿನ ಸೌಗಂಧಿಪುರವಾಗಿತ್ತು. ರಟ್ಟ ಮಹಾರಾಜರ ಕಾಲದಲ್ಲಿ ಸೇವಂತಿಗೆ, ಮಲ್ಲಿಗೆ ವಿವಿಧ ಹೂಗಳಿಂದ ತುಂಬಿದ್ದ ಈ ನಾಡು ಸೌಗಂಧಿಪುರವೆಂದೇ ಖ್ಯಾತಿಯಾಗಿತ್ತು. ಹೆಸರಿಗೆ ತಕ್ಕಹಾಗೇ ಹೂಗಳ ಪರಿಮಳ ಇಲ್ಲಿ ಆವರಿಸಿತ್ತು.


ಅದೇನಾಯಿತೋ ಗೋತ್ತಿಲ್ಲ... ಬ್ರಿಟಿಷರ ಆಂಗ್ಲ ಭಾಷೆ, ಆಧುನಿಕ ಜಗತ್ತಿನತ್ತ ಜನರ ಆಕರ್ಷಣೆ ನಮ್ಮೂರಿನ ಸುಂದರಿಯ ಹೆಸರನ್ನೇ ಬದಲಾಯಿಸುವಂತೆ ಮಾಡಿತು ಎಂದು ನಮ್ಮ ಹಿರಿಯರು ಈಗಲೂ ದೂರುತ್ತಾರೆ. ಸೌಗಂಧಿಪುರದಿಂದ ಸೌಂದತ್ತಿಯಾಗಿ ಈಗ ಸವದತ್ತಿಯಾಗಿದೆ. ಆದರೆ, ನನಗೆ 'ಸೌಗಂಧಿ'ಯೇ ಇಷ್ಟ.


ಬೆಳಗಾವಿಯಿಂದ 80 ಕಿ.ಮೀ. ಹಾಗೂ ಧಾರವಾಡದಿಂದ 40 ಕಿ.ಮೀ. ಅಂತರದಲ್ಲಿರುವ ನಾಡು ಈ ಸೌಗಂಧಿ. ಮಲಪ್ರಭೆಯ ತಟದಲ್ಲಿ, ಏಳು ಗುಡ್ಡಗಳ ಯಲ್ಲಮ್ಮನ ಆಶೀರ್ವಾದದಲ್ಲಿ ಬೆಳೆಯುತ್ತಿರುವ ಪುಟ್ಟ ಪಟ್ಟಣ. ತಾಲೂಕು ಪ್ರದೇಶವಾಗಿ ಸುತ್ತ ಹತ್ತಾರು ಹಳ್ಳಿಯ ಗೌಡ. ಮಲಪ್ರಭೆಯ ಕೃಪೆಯಿಂದ ತೋಟಗಳಿಂದ ಸಮೃದ್ಧ.


ಮಲಪ್ರಭೆ ಕೋಪವೇ ಸೌಗಂಧಿಗೆ ವರ: ಒಮ್ಮೆ ಮಲಪ್ರಭೆ ತನ್ನ ಪಾಡಿಗೆ ಹರಿದು ಹೋಗುತ್ತಿದ್ದಳು. ಬಯಲು ದಾಟಿ ಸಾಲು ಗುಡ್ಡಗಳ ಸಂದಿಯಲ್ಲಿ ಧಾರೆಯಾಗಿ ಸಾಗುತ್ತಿದ್ದಳು. ಪಕ್ಕದಲ್ಲೇ ಇದ್ದ ಗುಡ್ಡವೊಂದರ ಮೇಲೆ ಕುಳಿತ ನವಿಲೊಂದು, "ಮಲಪ್ರಭೆ ನನ್ನನ್ನು ನೋಡಿ ಹೆದರಿ ಹೋಗುತ್ತಿದ್ದಾಳೆಂದು" ಕೇಕೆ ಹಾಕಿದೆ. ಇದರಿಂದ ಕೋಪಗೊಂಡ ಮಲಪ್ರಭೆ ಹಿಂದೆ ಬಂದು ನವಿಲು ಕುಳಿತ ಗುಡ್ಡವನ್ನೇ ಛಿದ್ರ ಮಾಡಿ ಮುಂದೆ ಸಾಗಿದಳಂತೆ. ಈಗ ಆ ಪ್ರದೇಶವೇ 'ನವಿಲುತೀರ್ಥ' ಎಂಬ ತಾಣವಾಗಿ ಪ್ರಸಿದ್ಧಿಯಾಗಿದೆ.


ನಮ್ಮ ತಾತ-ಮುತ್ತಾತರಿಂದ ಬಂದ ಈ ಕಥೆ ಇಂದಿಗೂ ಇಲ್ಲಿ ಪ್ರಸ್ತುತ. ಪ್ರತಿ ಬಾರಿಯೂ ನವಿಲುತೀರ್ಥಕ್ಕೆ ಹೋದಾಗ ಈ ಕಥೆ ನಿಜವಿರಬಹುದೇನೋ ಅನಿಸುತ್ತದೆ. ವಿಶೇಷವೆಂದರೆ ಈ ತಾಣದ ಸುತ್ತಮುತ್ತ ಸಾಕಷ್ಟು ನವಿಲುಗಳಿಗೆ. ಸ್ವಚ್ಛಂದವಾಗಿ ತಿರುಗುವ ಅವುಗಳನ್ನು ನೋಡಿದರೇ ಈ ತಾಣಕ್ಕೆ ನವಿಲುತೀರ್ಥ ಎಂಬ ಹೆಸರಿಟ್ಟಿರುವುದು ಸೂಕ್ತ. ಅನಂತರ ರಾಜ್ಯ ಸರ್ಕಾರ ಇಲ್ಲಿ ಒಂದು ಅಣೆಕಟ್ಟು ನಿರ್ಮಿಸಿ ಅದಕ್ಕೆ ನವಿಲುತೀರ್ಥ ಅಣೆಕಟ್ಟು ಎಂದೇ ಹೆಸರಿಟ್ಟಿದೆ.


ಸೌಗಂಧಿಯ ಕೋಟೆ: ರಟ್ಟ ಅರಸರ ಕಾಲದಲ್ಲಿ ಪರಸಗಢ ಎಂಬ ಕೋಟೆ ಸೌಗಂಧಿಯ ಹೃದಯಭಾಗದಲ್ಲಿನ ಎತ್ತರದ ಗುಡ್ಡದ ಮೇಲೆ ನೆಲೆನಿಂತಿದೆ. ಶತಮಾನಗಳ ಬಿಸಿಲು ಮಳೆಯನ್ನು ಕಂಡ ಕೋಟೆ ಈಗಲೂ ಸೌಗಂಧಿಪುರದ ಸಮೃದ್ಧಿಯನ್ನು ಸಾರುತ್ತಿದೆ. ಬ್ರಿಟಿಷರ ತೋಪುಗಳಿಗೆ ಎದೆಯೊಡ್ಡಿ ಅಲುಗದ ಕನ್ನಡಿಗರ ಕೋಟೆ. ಪ್ರಸ್ತುತ ಪ್ರವಾಸಿಗರ ಬೀಡು.


ಇದನ್ನು ಹೊರತುಪಡಿಸಿ ಇನ್ನೊಂದು ಕೋಟೆ ಪಟ್ಟಣದಿಂದ 2 ಕಿ.ಮೀ. ಅಂತರದಲ್ಲಿ ಇನ್ನೊಂದು ಬೆಟ್ಟದ ಮೇಲಿದೆ. ಆದರೆ, ಶತ್ರುಗಳ ಭಾರೀ ದಾಳಿ ಕೋಟೆಯನ್ನು ಅಭದ್ರಗೊಳಿಸಿದೆ.


ಇಷ್ಟಾಯಿತು ನಮ್ಮೂರಿನ ಪುಟಾಣಿ ಕಥೆ. ಪುರಾತನ ಸೌಗಂಧಿಯ ಹೆಸರು ಈಗಲೂ ಅಜರಾಮರವಾಗಿಬೇಕೆಂದು ಪಟ್ಟಣದ ಒಂದು ಪ್ರದೇಶಕ್ಕೆ ಸೌಗಂಧಿಪುರವೆಂದೇ ಹೆಸರಿಡಲಾಗಿದೆ.

ಸಮಯ ಸಿಕ್ಕರೇ ಒಮ್ಮೆ ನಮ್ಮೂರಿಗೆ ಬಂದು ಹೋಗಿ...

ಸೋಮವಾರ, ಜುಲೈ 21, 2008

ಮೊದಲ ಮಾತು...

ನ್ನದು ಅಂತಾ ಒಂದು ಪುಟ್ಟ ತಾಣ. ಅದರಲ್ಲ್ಲಿ ನನ್ನ ಕನಸುಗಳ ಮುತ್ತು ಪೊಣಿಸಿ, ಸಾಲಾಗಿ ನಿಮ್ಮುಂದೆ ಜೋಡಿಸಬೇಕೆಂಬ ಪುಟ್ಟ ಆಸೆ ಬಹು ದಿನಗಳಿಂದ ಇತ್ತಾದರೂ ಕೈಗೂಡಿರಲಿಲ್ಲ. ಇದೀಗ ನನಸಾಗಿದೆ. ಈಗಷ್ಟೇ ತೆರೆದ ಈ ಪುಟಕ್ಕೆ ಏನು ಗೀಚಬೇಕೆಂದು ತಿಳಿಯುತ್ತಿಲ್ಲ. ಆದರೂ ಗೀಚಬೇಕೆಂಬ ಹಠಕ್ಕೆ ಬಿದ್ದಿದ್ದೇನೆ....

'ಮೊದಲ ಚುಂಬನಂ ದಂತ ಭಗ್ನಂ' ಅಂತಾರೆ. ನನಗೂ ಈಗ ಹಾಗೇ ಅನಿಸ್ತಿದೆ. ಆದರೆ, ಇದು ಮುತ್ತಲ್ಲ... ಮನದ ಮಾತು. ಹೇಗೆ ಆರಂಭಿಸಬೇಕೆಂಬ ತಳಮಳ, ಗೊಂದಲ.

ಮೊದಲ ಪ್ರೇಮ ಪತ್ರ ಬರೆಯುವಾಗಿ ಹಠಾತ್ತ್ ಕವಿಯಾಗಿ ಸಾಲು ಸಾಲು ಗೀಚಿದಂತೆ...ಛೇ, ಬರೆದಿದ್ದು ಸರಿಯಿಲ್ಲ...ಇನ್ನಷ್ಟು ಚೆನ್ನಾಗಿ ಬರಿಬಹುದಿತ್ತು ಎಂದು ಮನಸ್ಸು ಎಂದೋಡನೆ ಹಾಳೆ ಹರಿದು ಡಬ್ಬಿ ತುಂಬುತ್ತವೆ. ಗಂಟೆಗಟ್ಟಲೇ ಬರೆದರೂ ಒಂದು ಸಾಲೂ ಪೂರ್ಣಗೊಳ್ಳದಂತ ಸ್ಥಿತಿ....

ಈಗಲೂ ನಾನು ಮೊದಲ ಪ್ರೇಮ ಪತ್ರ ಬರೆಯುತ್ತಿದ್ದೇನೆನೋ ಅನಿಸುತಿದೆ. ಮೊದಲ ಮಳೆಗೆ ಮುಖವೊಡ್ಡುತ್ತಿದ್ದೇನೆ. ಮಿಂದಾದರೂ ಸರಿಯೇ ಮಧುರ ಭಾವನೆಗಳ ಮಾತು ನಿಮ್ಮುಂದೆ ಹರಡುತ್ತಿದ್ದೇನೆ. ಜೀವನಾನುಭವ, ಬಾಲ್ಯದ ಸವಿನೆನಪು, ಕಾಲೇಜು ತರಂಗ, ಸ್ನೇಹಿತರ ಸಿಂಚನ, ಮುಗುಳ್ನಗೆಯ ಹುಡುಗಿ... ಇನ್ನೂ ನನ್ನ ಸಿಹಿಕಹಿ ಅನುಭವ ನಿಮ್ಮ ಮುಂದೆ ಇಡಬಯಸುತ್ತೇನೆ. ಸರಿ-ತಪ್ಪು ನೀವು ನನ್ನ ಜತೆಗಿರುತ್ತೀರಲ್ಲವೇ...

ನಿಮ್ಮವ,
ಮಂಜು....