ಭಾನುವಾರ, ನವೆಂಬರ್ 21, 2010

ಸುದ್ದಿ ಸಮಾದಿ !

ರಾಜಕೀಯ ಸುದ್ದಿಗಳ (!) ರಾಶಿಯಲ್ಲಿ ಎಷ್ಟೋ ಉತ್ತಮ ವರದಿಗಳು ಮಣ್ಣಾಗುತ್ತವೆ ಎಂದು ಕೇಳಿದ್ದೆ. ಇತ್ತೀಚೆಗೆ ನಡೆದ ಘಟನೆಯೊಂದರ ವರದಿ ಪತ್ರಿಕೆಗಳಲ್ಲಿ ಕಂಡು ಕಾಣದಾದಾಗ ಈ ಮಾತು ನಿಜವೆನಿಸಿ ಪೇಚೆನಿಸಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರುಮಾನ್ವಿ ನಿಮಗೆ ನೆನಪಿರಬಹುದು. 2007, ಎಪ್ರಿಲ್ 24 ರಂದು ಸಂದೀಪ ಎಂಬ ಪುಟ್ಟ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಇದು ದೊಡ್ಡ ಸುದ್ದಿಯಾಯಿತು. ರಾಷ್ಟ್ರ ಮಟ್ಟದ ಪತ್ರಿಕೆಗಳು, ಟಿವಿ ವಾಹಿನಿಗಳು ವರದಿ ಮಾಡಿದ್ದವು. ಇದೇ ಗ್ರಾಮದಲ್ಲಿ ಶನಿವಾರ (20 ನವೆಂಬರ್ 2010) ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ.
ಮಾನಸಿಕ ಅಸ್ವಸ್ಥ ಎಂದು ಹೇಳಲಾದ ಶಿಕ್ಷಕನೊಬ್ಬ ಮೂವರು ಶಾಲಾ ಮಕ್ಕಳನ್ನು ಬಾವಿಗೆ ಎಸೆದು ಒಬ್ಬಳು ಬಾಲಕಿಯ ಸಾವಿಗೆ ಕಾರಣನಾಗಿದ್ದಾನೆ. ಇತರೆ ಇಬ್ಬರು ಬಾಲಕರು ಪಾರಾಗಿದ್ದಾರೆ. 1ನೆ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಗಗನ್ ಮೃತ ವಿಧ್ಯಾರ್ಥಿನಿ. ಘಟನೆಯ ಚಿತ್ರಣಗಳು ತೀವ್ರ ಮನ ಮಿಡಿಯುವಂತಿದ್ದವು. ಈ ಕುರಿತು ಕೆಲವೇ ಪತ್ರಿಕೆಗಳು ಉತ್ತಮ ವರದಿ ಪ್ರಕಟಿಸಿದರೆ ಇನ್ನುಳಿದ ಪತ್ರಿಕೆಗಳು ಸಾಧಾರಣ ಸುದ್ದಿಯ ಸ್ಥಾನ ನೀಡಿ ಕೈ ತೊಳೆದುಕೊಂಡಿವೆ.
ಹೀಗೇಕೆ?
ರಾಜಕೀಯ ಸುದ್ದಿಗಳೇ ಈಗ ಟಿವಿ ಪರದೆ ಹಾಗೂ ಪತ್ರಿಕೆಗಳ ಪುಟಗಳನ್ನು ತುಂಬಿಕೊಂಡಿವೆ. ಸರಕಾರದಲ್ಲಿ ಬಿನ್ನಮತ, ಸಿಎಂ ಸ್ಥಾನ ಅತಂತ್ರ ಇಂತಹ ರಾಜಕೀಯ ಸುದ್ದಿಗಳಿಂದ ಮಾನವೀಯ ವರದಿಗಳು, ಸುದ್ದಿಗಳಿಗೆ ಮಹತ್ವ ಬರುತ್ತಿಲ್ಲ. ಹೀಗಾಗಿ ಸಣ್ಣ ಪುಟ್ಟ ಸುದ್ದಿಗಳು ಸಂದಿ-ಗೊಂದಿಗೆ ತುರುಕಲ್ಪಡುತ್ತಿವೆ. ಒಂದೆರಡು ಸಾವಿಗೆ ಬೆಲೆ ಇಲ್ಲದಂತಾಗಿದೆ.
ಏಕೆ? ಪುಟ್ಟ ಬಾಲಕಿಯ ಸಾವು ಸುದ್ದಿಯಲ್ಲವೇ. ಏನು ಅರಿಯದ ಗಗನ್ ಶಿಕ್ಷಕನ ಹುಚ್ಚಾಟಕ್ಕೆ ಬಲಿಯಾಗಿದ್ದಾಳೆ. ಆಕೆಯ ಕುಟುಂಬ ಕಣ್ಣಿರು ಹರಿಸುತ್ತಿದ್ದು, ಇಡೀ ಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಸುದ್ದಿಗೂ ಮಹತ್ವ ನೀಡಬೇಕಿತ್ತಲ್ಲವೇ? ಇಂತಹ ಎಷ್ಟೋ ಸುದ್ದಿಗಳು ದಿನವು ಹೀಗೆ ಮಣ್ಣಾಗುತ್ತವೆ.

ಬುಧವಾರ, ನವೆಂಬರ್ 17, 2010

ಚಾರ್ಲಿನ್ ಚಾಪ್ಲಿನ್ ಆಣಿಮುತ್ತು










* ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಮ್ಮಸಮಸ್ಯೆಗಳು ಕೂಡ.
* ನಾವು ನಗು ಕಾಣದ ದಿನವೇ ನಮ್ಮ ಜೀವನದ ಅತಿ ದುಃಖದ ದಿನ.
* ನಾನು ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ, ಏಕೆಂದರೆ ನನ್ನ ಕಣ್ಣಿರು ಯಾರಿಗೂ ಕಾಣುವುದಿಲ್ಲ.

ಮಂಗಳವಾರ, ನವೆಂಬರ್ 16, 2010

ಜೀವನದ ರಹಸ್ಯ !

ಜೀವನದ ಕೊನೆಯ ದಿನಗಳು ಅವು.
98 ವಯಸ್ಸಿನ ಅಜ್ಜಿ ಸಾವಿನ ಬಾಗಿಲು ತಟ್ಟುತ್ತಿದ್ದಳು. ಆಕೆಯ ಕೊನೆಯ ದಿನಗಳು ಸುಂದರವಾಗಿರಲಿ ಎಂಬುದೇ ಅವರ ಮನೆಯವರ ಆಶಯ. ಕುಟುಂಬ ಸದಸ್ಯರೆಲ್ಲ ಆಕೆಯ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಹಾಲು, ಹಣ್ಣು, ಸಿಹಿ ಪದಾರ್ಥ ಏನು ನೀಡಿದರೂ ಅಜ್ಜಿಗೆ ಇಷ್ಟವಿರಲಿಲ್ಲ.
ಅಜ್ಜಿಯ ಹವ್ಯಾಸ ಅರಿತಿದ್ದ ಯುವತಿಯೊಬ್ಬಳು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಬಿಸಿ ಹಾಲಿನೊಂದಿಗೆ ಸೇರಿಸಿ ಅಜ್ಜಿಗೆ ನೀಡಿದಳು. ಮೊದ ಮೊದಲು ಬೇಡ ಅಂದ ಅಜ್ಜಿ, ತುಸು ಕುಡಿದು ಕೊನೆಗೆ ಪೂರ್ತಿ ಸೇವಿಸಿದಳು.
ಜೀವನದ ಕೊನೆಯ ದಿನಗಳು ಸುಂದರವಾದವು ಎಂಬುದು ಅಜ್ಜಿಯ ಕಂಗಳಲ್ಲಿ ಸ್ಪಷ್ಟವಾಗಿತ್ತು. ಕೊನೆಗೆ "ಜೀವನದ ರಹಸ್ಯವೊಂದನ್ನು ನನಗೆ ಹೇಳು" ಎಂದು ಯುವತಿ ಕೋರಿದಾಗ ಅಜ್ಜಿ ಹೇಳಿದಳು.
"ನಾನು ಕುಡಿದ ಹಾಲನ್ನು ಕೊಟ್ಟ ಹಸುವನ್ನು ಯಾರಿಗೂ ಮಾರಬೇಡ !"

ಶನಿವಾರ, ಅಕ್ಟೋಬರ್ 23, 2010

ನನಸೇ ನೀ ಕನಸು ಏಕಾದೇ ?

ಲ್ಲಿ ಅವಳು ಮತ್ತು ನಾನು...
ದಿಢೀರ್ ಬಂದ ಜೋರು ಮಳೆ. ಮಳೆ ನೀರಿಗೆ ನೆನೆಯದಂತೆ ನಿಲ್ಲಲು ಯಾವುದೇ ನೆರಳು ಕೂಡ ಇಲ್ಲ. ಇದ್ದಿದ್ದು ಒಂದೇ ಒಂದು ಛತ್ರಿ. ಅದಕ್ಕೊಂದು ಸಣ್ಣ ರಂಧ್ರ. ನೆತ್ತಿಯ ಮೇಲೆ ತಟ ತಟ ಸೋರುತ್ತ ಬೀಳುವ ಮಳೆ ಹನಿ. ಆ ಛತ್ರಿಯ ಕೆಳಗೆ ನಾನು ಮತ್ತು ಅವಳು ಮಳೆ ನೀರಿಗೆ ಸಿಲುಕದಂತೆ ಮುದುಡಿ ನಿಲ್ಲಬೇಕು.
ಇದೇನು ಹಗಲು ಕನಸು ಕಾಣುತ್ತಿದ್ದಾನೆ ಅನ್ನುತ್ತಿದ್ದಿರಾ? ಹೌದು, ಈಗ ಇದು ಕನಸೇ. ಬಹುಷ ಈ ಕನಸು ನನಸಾಗಬಾರದೆ ಎಂದು ಕನಿಷ್ಠ ಸಾವಿರ ಬಾರಿ ಅಂದುಕೊಂಡಿದ್ದೇನೆ. ಆದರೂ ಒಂದು ಮಾತು ಹೇಳಾ. ಇದು ಬರೀ ಕನಸಲ್ಲ. ನನಸೇ ಇಲ್ಲಿ ನನ್ನ ಕನಸು.
********
ಎಲ್ಲರೂ ಕನಸು ಕಾಣುತ್ತಾರೆ. ಅದು ನನಸು ಆಗಲೆಂದು ಬಯಸುತ್ತಾರೆ, ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ, ಕೆಲವೊಮ್ಮೆ ನಿಜವಾಗಿ ನಡೆದ ಮಧುರ ಘಟನೆಯೊಂದು ಮತ್ತೊಮ್ಮೆ ನಡೆಯುವುದಿಲ್ಲ. ದಿನ ಕಳೆದಂತೆ ಅದು ನೆನಪು ಮಾತ್ರವಾಗಿ, ಕನಸಿನ ರೂಪ ಪಡೆಯುತ್ತದೆ. ಮತ್ತೆ ಮತ್ತೆ ಆ ಕನಸು ಬೀಳುತ್ತದೆ. ಓ ದೇವರೇ, ಮತ್ತೊಮ್ಮೆ ಆ ಕನಸು ನನಸಾಗಬಾರದೆ ಎಂದು ಮನಸು ಬಹಳ ತುಡಿಯುತ್ತೆ, ನಲಗುತ್ತೆ, ಕೊನೆಗೆ ಅಳುತ್ತೆ.
ಪದೇಪದೇ ಕನಸು ಕಂಡು ಕಂಗಾಲಾಗುವ ಬದಲು ದಿಕ್ಕೆಟ್ಟು ಓಡಿ ಹೋಗಬೇಕು... ಅಲ್ಲಿ ಆ ಮಳೆ ಹುಡುಗಿ ಹುಡುಕಿ, ರಂಧ್ರದ ಛತ್ರಿ ಹಿಡಿದು ಮಳೆಯಲ್ಲಿ ನೆನೆಯೋಣ ಅನಿಸುತ್ತೆ.
********
ಅದು ಮಳೆಗಾಲ. ಪ್ರಕೃತಿಯ ಸುಂದರ ತಾಣ, ಮಲೆನಾಡಿನ ವನಸಿರಿ ನೋಡುವ ಅಸೆ. ನನಗಿಷ್ಟವಾದ ಅವಳೊಂದಿಗೆ ಹೋಗುವಾಸೆ. ನಾನೆಂದರೆ ಅವಳಿಗೆ ಬೆಟ್ಟದಷ್ಟು ಇಷ್ಟ. ಸರಿ ಯಾವುದಾದರೂ ಬೆಟ್ಟಕ್ಕೆ ಹೋಗೋಣ ಬಾರೆ ಅಂದಾಗ ಹೂಂ ಎಂದು ಮುದ್ದು ನಗೆ ಬೀರಿದಳು.
ಹೀಗೆ ಶುರುವಾಯ್ತು ನಮ್ಮ ಪರ್ವತಾರೋಹಣ. ಇಬ್ಬರೂ ಬೆಟ್ಟ ಏರಿ, ಗುಡ್ಡ ಸುತ್ತಿ, ಹಾಡಿ ಕುಣಿದಾಡಿದರೂ ಸುಸ್ತು ಕಾಣಲಿಲ್ಲ. ಸ್ವಚ್ಛಂದ ಹಕ್ಕಿಗಳಾಗಿ ಹಾರುವ ನಮ್ಮನು ನೋಡಿ ಮುಗಿಲು, ಭೂಮಿ ಒಂದಾದವು ಎನ್ನುವಷ್ಟು ಆಹ್ಲಾದಕರ ಪರಿಸರ.
ಮೇಘ ಮೇಳೈಸಿ ಬಂದಾಗ ನಾವು ಬೆಟ್ಟದ ಮೇಲೆ ಬಂದಿದ್ದೆವು. ಬಿಸಿಲ ಜೊತೆ ಮೇಘಗಳು ಹನಿಯೊಡೆದಾಗ ಬಾನಗಲ ಕಾಮನಬಿಲ್ಲು ಮೂಡಿ ರಮ್ಯ ಚೈತ್ರ ಕಾಲ. ಇನ್ನೇನು ಮಳೆ ಹನಿ ಬಿರುಸಾದಾಗ ದಿಕ್ಕಾಪಾಲಾದ ನಾವು ಮರವೊಂದರ ಕೆಳಗೆ ನಿಲ್ಲುವದು ಅನಿವಾರ್ಯವಾಯಿತು. ಮಳೆಯಲ್ಲಿ ನೆನೆಯುವ ಹಾಗೆ ಮಾಡಿದೆ ಎಂದು ನನ್ನವಳು ಬೈಯುವಳೋ ಎಂದು ಅವಳ ಮುಖ ನೋಡಿದರೆ, ಪಾಪ ನನ್ನ ಹುಡುಗ ನೆನೆಯುತ್ತಿದ್ದಾನೆ ಎಂದು ಅವಳು ಮರಗುತ್ತಿದ್ದಳು. ಆ ಕಣ್ಣಲ್ಲಿ ನೋವಿತ್ತು, ಮುಖದಲ್ಲಿ ಮಮತೆ ಇತ್ತು.
ತನ್ನ ಪುಟಾಣಿ ಬ್ಯಾಗನಿಂದ ಪುಟ್ಟ ಛತ್ರಿ ತೆಗೆದು ಆಸರೆಯದಳು. ಕಣ್ಣಲ್ಲಿ ಥ್ಯಾಂಕ್ಸ್ ಹೇಳಿದೆ. ಬೆಳದಿಂಗಳು ಮಲ್ಲಿಗೆ ಚೆಲ್ಲುವಷ್ಟು ಮುದ್ದಾಗಿ ನಕ್ಕಳು. ಅವಳಿಗೆ ನಾನು ಆಸರೆಯಾಗಿ, ನನಗೆ ಅವಳು ಆಸರೆಯಾಗಿ ನಿಂತಿದ್ದೆ ಬಂತು. ಉಹುಂ ಮಳೆ ನಿಲ್ಲುವ ಕರುಣೆ ತೋರಲಿಲ್ಲ.
ಈ ನಡುವೆ, ನನ್ನವಳ ಛತ್ರಿಯ ಚಾವಣಿಯಲ್ಲಿ ರಂಧ್ರ ಬಿದ್ದಿದ್ದರಿಂದ ಅದು ಹನಿಯಾಗಿ ತಟ ತಟ ಬೀಳುತ್ತಿದ್ದಂತೆ 'ಇದೊಳ್ಳೆ ಸಮಸ್ಯೆ ಆಯ್ತಲ್ಲ' ಎಂದು ಪೇಚಾಡಬೇಕಾಯಿತು. ಅದು ಅಷ್ಟಕ್ಕೇ ಸುಮ್ಮನಾಗದೆ ನೀರು ಝರಿಯಂತೆ ಹರಿಯತೊಡಗಿದಾಗ ನಾವಿಬ್ಬರು ಕಂಗಾಲು. ಇನ್ನು ಲ್ಲೇ ನಿಂತರೆ ಬಲು ಕಷ್ಟ ಎಂದು ಹಾಗೆ ಜೊತೆಯಾಗಿ ಮುಂದೆ ಹೆಜ್ಜೆ ಹಾಕಬೇಕಾಯಿತು. ಬೆಟ್ಟ ದಾಟಿ ರಸ್ತೆ ತಲುಪಿದಾಗ ಬಹುತೇಕ ಮಜ್ಜನರಾಗಿದ್ದೆವು.
ಸಾಕಪ್ಪ ಸಾಕು, ಯಾವುದಾದರು ವಾಹನ ಸಿಕ್ಕರೆ ಊರು ತಲುಪಿದರೆ ಸಾಕೆಂಬ ಭಾವನೆ ಆಗಲೇ ಮೂಡಿತ್ತು. ಇಷ್ಟಾದರೂ ಮುಂಗಾರು ಮಳೆ ಹುಡುಗಿಯಂತೆ ನನ್ನವಳು ಹಕ್ಕಿಯಂತೆ ಹಾಡುತ್ತ, ರಸ್ತೆ ಮೇಲೆಯೇ ಹೆಜ್ಜೆ ಹಾಕುತ್ತಿದ್ದರೇ ನನಗೆ ಚಳಿ ಅಮರಿ ಮೈಯೆಲ್ಲಾ ನಡುಕ.
"ಸಾಕು ಬಾರೆ, ಮನೆಯಲ್ಲಿ ಅಮ್ಮ ಪೂಜೆ ಮಾಡ್ತಾಳೆ ನಡಿ" ಎಂದಾಗ, ಹಲ್ಲುಗಿಂಜಿದ ನನ್ನವಳ ಮುಖ ನೋಡಿ ಒಳಗೊಳಗೇ ನಕ್ಕಿದ್ದು ಉಂಟು. ಕೊಂಚ ಮುಂದೆ ಸಾಗಿದೊಡನೆ ಕಾಣಿಸಿದೆ ಆಟೋಗೆ ಕೈ ಅಡ್ಡ ಹಾಕಿ ಊರು ತಲುಪಿ ಮನಸು ನಿರಾಳವಾದಾಗ ಮಳೆಯೂ ಶಾಂತವಾಗಿತ್ತು. 3 ಕಾಸಿನ ಮಳೆ ಅಂತಾ ನಾನು ಬೈದರೆ, ನಮ್ಮ ಪಿಕ್ನಿಕ್ ಹಾಳಾಯಿತು ಎಂದು ನನ್ನವಳಿಗೆ ಬೇಸರ.
ಬೆಳಗ್ಗೆ ಸರ್...ಸರ್...ಸರ್... ಎಂಬ ಸದ್ದಿನೊಂದಿಗೆ ಮುಗಿನ ಗೊನ್ನೆ ಸುರಿಸುತ್ತ ಬಂದ ನನ್ನ ಮಳೆ ಹುಡುಗಿಯ ನೋಡಿದಾಗಲೇ ನನಗೆ ಅರಿವಾಗಿದ್ದು ಅವಳಿಗೆ ಶೀತವಾಗಿತ್ತು. ಮುಖ ಕೆಂಪಗಾಗಿಸಿ, "ಕೋತಿ, ನಿನ್ನೆ ಅಮ್ಮ ಎಷ್ಟು ಬೈದರು ಗೊತ್ತಾ. ಮನೆಯಲ್ಲಿ ಯಕ್ಷಗಾನ ನಡೆಯಿತು. ಜತೆಗೆ ಈ ಹಾಳಾದ್ದ ಶೀತ ಬೇರೆ" ಎಂದು ಮಸಾಲೆ ಹಾಕಿ ಕುಕ್ಕಿದ್ದಳು.
---------
ಇದಾದ ಮೇಲೆ ಎಷ್ಟೋ ಬಾರಿ ಮತ್ತೆ ಆ ಬೆಟ್ಟಕ್ಕೆ ಹೋಗಬೇಕು. ಅದೇ ಹಳೆ ತೂತು ಬಿದ್ದ ಛತ್ರಿಯಲ್ಲಿ ಮಳೆಯಲ್ಲಿ ನೆನೆಯಬೇಕು ಎಂದು ಯೋಚಿಸಿದರೂ ಅದು ಸಾಧ್ಯವಾಗಲಿಲ್ಲ. ಬಹುಶ ಅದು ನನ್ನ ಸುಂದರ ದಿನ. ಕಾಣದ ಕನಸು ಅಂದು ನನಸಾಗಿತ್ತು. ಮತ್ತೆ ಮತ್ತೆ ಆ ಕನಸನ್ನು ಇಂದಿಗೂ ಕಾಣುತ್ತೇನೆ. ಮುಂದೆಯೂ ಕಾಣುತ್ತೇನೆ.

ಶನಿವಾರ, ಸೆಪ್ಟೆಂಬರ್ 18, 2010

ಬೂದಿಯಾದ ನೆನಪು...

ವತ್ತು ಆಫೀಸ್ ಗೆ ರಜಾ.
ಸುಮ್ನೆ ಒಬ್ಬನೇ ಬೇಜಾರಾಗಿತ್ತು. ಒಂಟಿ (!) ಜೀವನ ಬಲು ಬೇಸರ. ಹೊರಗೆ ಮಳೆ, ಸುತ್ತೋಕೆ ಆಗದೆ, ಮನೆಯಲ್ಲೂ ಕುಡೋಕೆ ಆಗದೆ ಚಡಪಡಿಕೆ. ಬೆಳಗ್ಗೆ ಮಾಡಿದ್ದ ಟೀ ಮತ್ತೆ ಮತ್ತೆ ಬಿಸಿ ಮಾಡಿ ಹೊಟ್ಟೆಗೆ ಇಳಿಸುತ್ತಾ, ಬಿಸಿ ಹೊಗೆ ಉಗುಳುತ್ತಾ ಮನೆಯೆಲ್ಲ ಮಂಜು ದಟ್ಟಿಸಿತ್ತು. ಟಿವಿ ರಿಮೋಟ್ ಒತ್ತಿ ಒಂದರ ನಂತರ ಮತ್ತೊಂದು ಚಾನೆಲ್ ಬದಲಿಸಿದರೂ 'ಛೆ ಒಳ್ಳೆ ಪ್ರೋಗ್ರಾಮ್ ಇಲ್ವಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದೆ ಸಾಕಾಯ್ತು.

ಬೆಳಗ್ಗೆಯಿಂದ ತೆಪ್ಪಗೆ ಬಿದ್ದಿದ್ದ ಮೊಬೈಲ್ ಇದ್ದಕ್ಕಿದ್ದಂಗೆ ಕಿರುಚಿ ಕೊಂಡಾಗ ಎತ್ತಿ ಕಿವಿ ಕೊಟ್ಟೆ.
'ನೀನು ಬ್ಲಾಗ್ ನಲ್ಲಿ ಹಾಕಿದ ಲೆಟರ್ ಡಿಲೀಟ್ ಮಾಡು. ನಂಗೆ ಇಷ್ಟ ಆಗ್ಲಿಲ್ಲ. ಅಷ್ಟೇ...'
ಫೋನ್ ಮಾಡಿದಾಕೆ ತುಸು ಖಾರವಾಗಿ ಹೇಳಿದ್ದು. ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ಸರಿ ಆಯಿತು ಅಂದೆ. ಆ ಕಡೆ ಫೋನ್ ಕುಕ್ಕಿದ ಶಬ್ದ ಸ್ಪಷ್ಟವಾಗಿ ಕೇಳಿಸಿತು.
ಒಂದು ಪತ್ರ ಇಷ್ಟೊಂದು ಪ್ರಭಾವ ಬಿರಿತ್ತಾ. ಅಷ್ಟೊಂದು ಕಿರಿ ಕಿರಿ ನೀಡಿತ್ತೇನೋ.. ಹೋಗಲಿ ಬಿಡು ಡಿಲೀಟ್ ಮಾಡಿದರಾಯ್ತು ಎಂದು ಮತ್ತೆ ಹೊಗೆ ತುಂಬಿಸಲು ಅಣಿಯಾದೆ. ಎನೇನೋ ನೆನಪಾಯ್ತು.

'ಛೀ... ಇದೇನು ಕೆಟ್ಟ ಚಟ. ನಂಗೆ ಸ್ವಲ್ಪನೂ ಇಷ್ಟಾ ಆಗೋಲ್ಲ. ಬಿಟ್ಟು ಬಿಡು ಅಂತ ಎಷ್ಟು ಸಲ ಹೇಳೋದು. ನೀ ಹೀಗೆ ಮಾಡ್ತಿದ್ದಾರೆ ಮುಂದೆ ಸರಿ ಆಗೋಲ್ಲ. ತಿಳಿತಾ...'
ಹುಂ ಗುಟ್ಟಿದ್ದೆ.
ಹುಂ ಅಲ್ಲ ಆನೆ ಮಾಡು ಅಂದಾಗ, ಅದಕ್ಕೂ ಹುಂ ಅಂದೆ. ನಾನು ಸುಳ್ಳು ಹೇಳ್ತಿದ್ದೇನೆ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅಧಿಕಾರ ಚಲಾಯಿಸಿ ನನಗೆ ಒಳ್ಳೆಯ ಮಾತು ಹೇಳಿದ್ದಳು.

ಒಂದು ಸಾರಿ ಆಫೀಸ್ ಹತ್ತಿರದ ಹೋಟೆಲನಲ್ಲಿ ಹೊಗೆ ಬಿಡುತ್ತ ಕುಳಿತಿದ್ದನ್ನ ನೋಡಿ ಗಲ್ಲ ಉಬ್ಬಿಸಿದ್ದಳು. 2 ದಿನ ಮಾತು ಬಂದ್. ಸಾಮಾನ್ಯವಾಗಿ ಹುಸಿ ಕೋಪ ಮಾಡಿಕೊಳ್ಳುತ್ತಿದ್ದ ಅವಳು ಆಗ ಸ್ವಲ್ಪ ಸೀರಿಯಸ್ ಆಗಿದ್ದು ನಂಗೆ ಭಯ ಮೂಡಿಸಿತ್ತು. ಹೇಗೋ ದಮ್ಮಯ್ಯ ಅಂದು ಅವಳನ್ನು ಪುಸಲಾಯಿಸಿ, ಹೊರಗೆ ಬಂದು ಮತ್ತೆ ದಂ ಎಳೆದಿದ್ದೆ. ಪಾಪ ಅವಳಿಗೆ ಮೋಸ ಮಾಡಿದೆನೋ ಅಂತ ಅನಿಸಿದ್ದಿಲ್ಲ.

ಮತ್ತೆ ಅವಳ ಮುಂದೆ ಬಂದಾಗ ನನ್ನ ಸು'ವಾಸನೆ' ಬರಬಾರದೆಂದು ಸುವಾಸನೆಯ ಸೋಪು, ಘಮ್ಮೆನ್ನುವ ಸೆಂಟು ಹಾಕಿದ್ದು ಉಂಟು. ಹಾಗೆ ಸುವಾಸನೆ ಹಿರಿ ಹೂವಿನಂತೆ ಅರಳುತ್ತಿದ್ದ ಅವಳು, 'ಸೆಂಟು ಒಳ್ಳೇದಿದೆ ಕಣೋ' ಅಂತು ಕಣ್ಣು ಮಿಟಿಕಿಸುತ್ತಿದ್ದಳು.
ಹೋಗುವಾಗ ತಿರುಗಿ ನೋಡಿ 'ಕೋತಿ' ಅಂತ ಬೈಯೋದನ್ನು ಮಾತ್ರ ಮರೆಯುತ್ತಿರಲಿಲ್ಲ. ಮುಂಗುರುಳು ಸವರಿ ತಿರುಗಿ ತಿರುಗಿ ನೋಡಿ ಹೋಗುತ್ತಿದ್ದ ಅವಳ ಮುಖದ ಮುದ್ದು ನಗು ಕಣ್ಮುಂದೆ ಉಳಿಯುತ್ತಿತ್ತು.

ಕೈ ಬೆರಳು ಸುಟ್ಟ ಅನುಭವವಾಗಿ ಎಚ್ಚರಗೊಂಡೆ. ಅವಳ ನೆನಪಲ್ಲಿ ಬೂದಿಯಾಗಿದ್ದೆ. ಈಗಲೂ ಅವಳು ಜತೆ ಇದ್ದಿದ್ದರೆ ಈ ಚಟ ಬಿಡುತ್ತಿದ್ದೆನೇನೋ....

ಕೈಲ್ಲಿದ್ದನ್ನು ಬಿಸಾಕಿ ಮನೆ ಹೊರಗೆ ಮಳೆಗೆ ಮುಖ ಒಡ್ಡಿದಾಗ ಹನಿಯಾಗಿ ಎಲ್ಲ ಕರಗಿ ಹೋದಂತಾಯಿತು.

ಮಂಗಳವಾರ, ಮೇ 18, 2010

ಯಾರಿಗುಂಟು ಯಾರಿಗಿಲ್ಲ...

ಯಾರಿಗುಂಟು ಯಾರಿಗಿಲ್ಲ...