ಭಾನುವಾರ, ಸೆಪ್ಟೆಂಬರ್ 14, 2008

ಪ್ಲೀಸ್...ಸಾಕು

ಬೆಳಗ್ಗೆ ಪೇಪರ್ ನೋಡುತ್ತಿದ್ದಂತೆಯೇ ಸರಣಿ ಸ್ಫೋಟ, 30 ಸಾವು. ಇದೇನು ಮಹಾ!. ದೇಶದ ಹಣದುಬ್ಬರ ಏರಿಳಿಯುವಂತೆ ಇದೂ ಸಾಮಾನ್ಯ ಸಂಗತಿ. ಇಂತಹ ಅಭಿಪ್ರಾಯ ಜನಸಾಮಾನ್ಯರಿಂದ ವ್ಯಕ್ತವಾದರೆ ಅಚ್ಚರಿಯೇನಲ್ಲ.

ಬೆಳಗ್ಗಿನ ಓಡಾಟ, ಬಸ್ಸು, ಟ್ರಾಫಿಕ್ಕು, ಆಫೀಸ್, ಮತ್ತೆ ಬಸ್ಸು, ಟ್ರಾಫಿಕ್ಕು, ಕಿರಿಕ್ಕು... ಇವುಗಳ ನಡುವೆ ಬಾಂಬ್ ಸ್ಫೋಟ, ರಕ್ತಪಾತ. ಪರವಾಗಿಲ್ಲ. ನಾವು ಅಡ್ಜಸ್ಟ್ ಮಾಡ್ಕೋತೀವಿ. ಏಕೆಂದರೆ ನಾವು ಇರೋದು ಅದಕ್ಕೆ ಅಲ್ಲವೇ.

ಮೊನ್ನೆಯಷ್ಟೇ ನಾವೆಲ್ಲ ನಡೆದಾಡುವ ಬೆಂಗಳೂರಿನ ಫುಟ್ ಪಾತ್ ನಲ್ಲಿ ಸ್ಫೋಟಗಳಾದವು. ಒಂದಲ್ಲ, ಎರಡಲ್ಲ ಒಂಭತ್ತು ಸ್ಫೋಟ. ಅಲ್ಲಿಯವರೆಗೂ ನಿದ್ರೆಯಲ್ಲಿದ್ದ ಸರ್ಕಾರ ಮತ್ತು ಪೊಲೀಸನವರು, "ಮಲಗಿದ ಹುಲಿಯನ್ನು ಎಬ್ಬಿಸಿದ್ದೀರಿ, ನಿಮ್ಮ ಸಾವನ್ನು ನೀವೇ ಆಹ್ವಾನಿಸಿದ್ದೀರಿ" ಎಂಬಂತೆ ಅಬ್ಬರಿಸಿದರು. ಬೆನ್ನಲ್ಲೇ, ಅಲ್ಲಲ್ಲಿ ದಾಳಿ, ಶಂಕಿತರ ಬಂಧನ, ಪಿತೂರಿ, ಖಂಡನೆ, ಸಂತ್ರಸ್ತರಿಗೆ ಪುಡಿಗಾಸು... ಹೀಗೇ ವಿಧವಿಧ ಹೆಡ್ಡಿಂಗ್್ಗಳು ಪತ್ರಿಕೆಗಳಲ್ಲಿ ರಾರಾಜಿಸಿದವು. ಇದರೊಂದಿಗೆ, ಆರೋಪ-ಪ್ರತ್ಯಾರೋಪಗಳು ಯಥೇಚ್ಛೆವಾಗಿಯೂ ಹರಿದುಬಂದವು. ಆಮೇಲೆ...ಬೆಂಗಳೂರಿನ ಟ್ರಾಫಿಕ್ ಗಲಾಟೆ ನಡುವೆ ಬಾಂಬ್ ಸದ್ದು ಕೇಳಲೇ ಇಲ್ಲ.

ಆದರೆ ಇದರಿಂದ ಲಾಭ ಆಗಿದ್ದಾದ್ದರೂ ಯಾರಿಗೆ? ಬಾಂಬ್ ಸ್ಫೋಟ ಮಾಡಿದವರು ‘ಜಿಹಾದ್' ಅಥವಾ ಸೇಡು ಅಂತಾರೆ. ಆಮೇಲೆ ಯಾವುದೋ ಮೂಲೆಯಲ್ಲಿ ಅಡುಗಿ ಕುಳಿತುಕೊಳ್ಳುತ್ತಾರೆ. ಅಲ್ಲಿಗೆ ಅವರ ಮಹಾನ್ ಸಾಧನೆ (!) ಮುಗಿಯಿತು. ಅವರನ್ನು ಹಿಡಿಯಲಾಗದ ಪೊಲೀಸರು ಪತ್ರಿಕೆಗಳ ಮುಂದಷ್ಟೇ ಅಬ್ಬರಿಸುತ್ತಾರೆ. ಕೆಲ ದಿನಗಳ ನಂತರ ಬಿಸಿ ಆರಿದ ಮೇಲೆ ಬಾಂಬ್ ಮಾತೇ ಇಲ್ಲ. ಇನ್ನೂ ರಾಜಕಾರಣಿಗಳು ಇದನ್ನೇ ಯದ್ವಾತದ್ವಾ ಎಳೆದಾಡಿ ತಮ್ಮ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಹೋಗಲೀ ಬಿಡಿ ಅದೆಲ್ಲ ಅವರ ಸ್ವಹಿತಾಸಕ್ತಿ.

ಆದರೆ, ಬಲಿಯಾದವನು ಬಡಪಾಯಿ ಪ್ರಜೆ ಮಾತ್ರ. ಸಾವಿನ ಮನೆ ತಲುಪುವವನು ಜನಸಾಮಾನ್ಯ. ಬೀದಿಗೆ ಬರುವುದು ಆತನ ಕುಟುಂಬ. ಭಿಕ್ಷೆ ಬೇಡುವುದು ಬಡವನ ಮಕ್ಕಳು... ಆಮೇಲೆ ಈ ಸತ್ತವ, ಆತನ ಕುಟುಂಬ ಎಲ್ಲೋ ನಶಿಸಿ ಹೋಗುತ್ತದೆ. ಕೇಳುವವರು ಯಾರೂ ಇಲ್ಲ.

ಆದರೆ, ಬೇರೆಲ್ಲವೂ ಸಾಮಾನ್ಯವಾಗಿಯೇ ಇರುತ್ತದೆ. ಜನಜೀವನ ಸಾಮಾನ್ಯ, ಸರ್ಕಾರದ ಕುರ್ಚಿ ಭದ್ರ, ಎಂದಿನಂತೆ ಟ್ರಾಫಿಕ್, ಯಾಂತ್ರಿಕ ಜೀವನ... ಮುಂದೇನು? ಮತ್ತೆ ಸರಣಿ ಸ್ಫೋಟ!

ಹೌದು. ಈಗ ಆಗಿದ್ದು ಇದೇ. ಬೆಂಗಳೂರು, ಅಹ್ಮದಾಬಾದ್ ಇದೀಗ ದೆಹಲಿ.....ಮುಂದೆ? ಇದಕೆಲ್ಲ ಅಂತ್ಯ ಯಾವಾಗ? ನಾವು ನಿರಮ್ಮಳವಾಗಿ ಬದುಕುವುದು ಯಾವಾಗ? ಸೇಡು ಯಾವಾಗ ಮುಗಿಯುತ್ತೆ? ಬಡವರ ರಕ್ತ ಬೀದಿಪಾಲಾಗುವುದು ನಿಲ್ಲುವುದ್ಯಾವಾಗ?

ಕಾಮೆಂಟ್‌ಗಳಿಲ್ಲ: